ಹೊನ್ನಾಳಿ: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡದೇ ಜನರಿಗೆ ಅನ್ಯಾಯ ಮಾಡಿತು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಶನಿವಾರ ಪಟ್ಟಣದಲ್ಲಿ ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲ್ಲೂಕಿನ ಪಡಿತರ ವಿತರಕರ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಅಧಿಕಾರಕ್ಕೆ ಬಂದ ತಕ್ಷಣ ಕೇಂದ್ರ ಸರ್ಕಾರಕ್ಕೆ ಕೆ.ಜಿ.ಗೆ ₹ 34ರಂತೆ ಅಕ್ಕಿ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು. ಮೊದಲು ಕೊಡುವುದಾಗಿ ಹೇಳಿದ್ದ ಕೇಂದ್ರ ನಂತರ ನಿರಾಕರಿಸಿತು. ಈಗ ಅದೇ ಅಕ್ಕಿಯನ್ನು ₹ 29ಕ್ಕೆ ಮಾರಾಟ ಮಾಡುತ್ತಿದೆ. ನಾವು ಪಡಿತರ ವ್ಯವಸ್ಥೆಯ ಮೂಲಕ ಉಚಿತವಾಗಿ ನೀಡಲು ಹೊರಟಿದ್ದ ಅಕ್ಕಿಯನ್ನು ಕೇಂದ್ರ ಹಣಕ್ಕೆ ಮಾರಾಟ ಮಾಡುತ್ತಿದೆ’ ಎಂದು ದೂರಿದರು.
ಪುರಸಭೆ ಸದಸ್ಯ ಧರ್ಮಪ್ಪ ಅವರು ಪಡಿತರ ವಿತರಕರ ಸಮಸ್ಯೆಗಳ ಕುರಿತು ಮಾತನಾಡಿದರು. ಆಹಾರ ಇಲಾಖೆಯ ನಿರೀಕ್ಷಕ ನಾಗರಾಜ್ ಪಡಿತರ ಇಲಾಖೆಯ ಮಾಹಿತಿ ನೀಡಿದರು.
4ಇಪಿ : ಹೊನ್ನಾಳಿ ಮೋಹನ್ ಎನ್ ಕ್ಲೇವ್ನಲ್ಲಿ ಪಡಿತರ ವಿತರಕರ ಸಂಘದಿಂದ ಮನವಿ ಸಲ್ಲಿಸಿದ ನಂತರ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸನ್ಮಾನಿಸಿತು.
ಹೊನ್ನಾಳಿ ತಾಲ್ಲೂಕು ನ್ಯಾಯಬೆಲೆ ಅಂಗಡಿಗಳ ಅಧ್ಯಕ್ಷ ಅರಬಗಟ್ಟೆ ಮಂಜಪ್ಪ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಕೆಂಚಿಕೊಪ್ಪ ಕುಬೇರಪ್ಪ, ಶಶಿಧರ್, ಚೇತನ್, ತುಗಲಹಳ್ಳಿ ಬಸವರಾಜಪ್ಪ, ಕೆ. ಪುಟ್ಟಪ್ಪ ಉಪಸ್ಥಿತರಿದ್ದರು.