ಕಂಪ್ಲಿ: ತಾಲ್ಲೂಕಿನ ಗಡಿ ಗ್ರಾಮವಾದ ಕಣಿವಿ ತಿಮ್ಮಲಾಪುರದ ರಸ್ತೆ ದುರಸ್ತಿ ಇಲ್ಲದಿರುವುದು ಒಂದೆಡೆಯಾದರೆ ಇಡೀ ರಸ್ತೆ ಅಕ್ಕಪಕ್ಕ ಮುಳ್ಳು ಬೇಲಿ ಗಿಡಗಳು ಬೆಳೆದು ಬಸ್ ಸಂಚಾರಕ್ಕೆ ತುಂಬಾ ಅಡ್ಡಿಯಾಗಿತ್ತು.
ಇದರಿಂದ ಸಾರಿಗೆ ಸಂಸ್ಥೆಯವರು ತಮ್ಮ ಗ್ರಾಮಕ್ಕೆ ಬಸ್ ಓಡಿಸಲು ಆಗುವುದಿಲ್ಲ ಎಂದು ಉತ್ತರ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಕಣವಿ ತಿಮ್ಮಲಾಪುರ– ರಾಮಸಾಗರ ಮಧ್ಯದ ಸುಮಾರು 6 ಕಿ.ಮೀ ರಸ್ತೆ ಅಕ್ಕಪಕ್ಕದ ಮುಳ್ಳು ಬೇಲಿ ಗಿಡಗಳನ್ನು ಭಾನುವಾರ ಶ್ರಮದಾನದ ಮೂಲಕ ತೆರವುಗೊಳಿಸಿದರು.
ಶ್ರಮದಾನದಲ್ಲಿ ರಮೇಶ್, ಕರವೇ (ನಾರಾಯಣ ಗೌಡ) ಗ್ರಾಮ ಘಟಕ ಅಧ್ಯಕ್ಷ ರುದ್ರೇಶ್, ಗ್ರಾಮದ ಹಿರಿಯರಾದ ಉಳ್ಳೂರು ಪಕ್ಕೀರಪ್ಪ, ಡಂಗಿ ಗಾದಿಲಿಂಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಗ್ರಾಮದಿಂದ ನಿತ್ಯ ರಾಮಸಾಗರ ಪ್ರೌಢಶಾಲೆ ಮತ್ತು ಕಂಪ್ಲಿ ಕಾಲೇಜಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆರಳುತ್ತಿದ್ದು, ಈಗಲಾದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತು ನಮ್ಮ ಗ್ರಾಮಕ್ಕೆ ಬಸ್ ಸಂಚರಿಸಲು ವ್ಯವಸ್ಥೆ ಮಾಡುವಂತೆ ವಿದ್ಯಾರ್ಥಿ ಗೊಲ್ಲರ ವೀರೇಶ್ ಮನವಿ ಮಾಡಿದರು.