ಹರಪನಹಳ್ಳಿ: ಪಟ್ಟಣದ ರಾಜೀವ್ ಗಾಂಧಿ ಸಮುದಾಯ ಭವನದ ಆವರಣದಲ್ಲಿ ಕಾರ್ಮಿಕ ಇಲಾಖೆಯು ವಿತರಿಸಿದ ಆಹಾರದ ಕಿಟ್ ಪಡೆಯಲು ಜನರುಸೋಮವಾರ ಮುಗಿ ಬಿದ್ದಿದ್ದರು.
ತಾಲ್ಲೂಕಿನಲ್ಲಿ ನೋಂದಾಯಿತ 18 ಸಾವಿರ ಕಾರ್ಮಿಕರಿದ್ದಾರೆ. 5 ಕೆ.ಜಿ. ಅಕ್ಕಿ, ಬೇಳೆ, ಅವಲಕ್ಕಿ, ಎಣ್ಣೆ, ಕಾರದಪುಡಿ ಒಳಗೊಂಡಿರುವ ಕಿಟ್ಗಳನ್ನು ತಾಲ್ಲೂಕಿಗೆ 1200 ಕಳುಹಿಸಲಾಗಿದೆ ಎಂದು ಕಾರ್ಮಿಕ ನಿರೀಕ್ಷಕ ನಾಗೇಶ್ ತಿಳಿಸಿದರು.
ಅವ್ಯವಹಾರ ಆರೋಪ ಖಂಡಿಸಿ ಪ್ರತಿಭಟನೆ: ಪುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಮತ್ತು ರಾಜ್ಯ ಇತರೆ ನಿರ್ಮಾಣ ಕಾರ್ಮಿಕರ ಫೇಡರೇಷನ್, ರಾಜ್ಯ ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿ ಕಾರ್ಮಿಕ ನಿರೀಕ್ಷಕ ನಾಗೇಶ್ ಅವರ ಮುಖಾಂತರ ಕಾರ್ಮಿಕ ಕಲ್ಯಾಣ ಮಂಡಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ವಿತರಿಸಿದ ಕಿಟ್ಗಳನ್ನು ಹಾಗೆಯೇ ಇರಿಸಿದರೆ ಕೆಟ್ಟು ಹೋಗುತ್ತವೆ. ನೋಂದಾಯಿತ ಕಾರ್ಮಿಕರಿಗೆ ಹಂತ ಹಂತವಾಗಿ ಟೋಕನ್ ವಿತರಿಸಲಾಗುವುದು. ಕೋವಿಡ್ ಇರುವ ಕಾರಣ ಅಂತರ ಕಾಯ್ದುಕೊಂಡು ಪಡೆಯಬೇಕು ಎಂದು ಕಾರ್ಮಿಕ ನಿರೀಕ್ಷಕ ನಾಗೇಶ್ ತಿಳಿಸಿದ್ದಾರೆ.