ಹರಪನಹಳ್ಳಿ: ‘ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅಸಮಾಧಾನ ಎಂದಿಗೂ ಆಗಲ್ಲ. ಸಚಿವನಾಗುವ ಆಸೆ ಇದೆ. ಪ್ರಯತ್ನ ಮುಂದುವರಿಸುವೆ’ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸಚಿವ ಸ್ಥಾನ ಕಲ್ಪಿಸುವಲ್ಲಿ ಬಳ್ಳಾರಿ ಜಿಲ್ಲೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ, ‘ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹೈಕಮಾಂಡ್ ಅವರನ್ನೇ ಕೇಳಬೇಕು’ ಎಂದರು.
‘ವಿಜಯನಗರ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ. ಹಾಗಾಗಿ ಜಿಲ್ಲಾ ಉಸ್ತುವಾರಿ ಒಬ್ಬ ಸಚಿವರಿಗೆ ಕೊಟ್ಟಿದ್ದಾರೆ. ಯಾವಾಗಲು ಆಶಾ ಜೀವಿಗಳಾಗಿರಬೇಕು ಎನ್ನುವ ನಂಬಿಕೆಯಲ್ಲಿದ್ದೇನೆ. ಸಚಿವ ಸ್ಥಾನ ಕೊಡುವುದು ಬಿಡುವುದು ವರಿಷ್ಠರಿಗೆ ಬಿಟ್ಟದ್ದು’ ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್, ಬಾಗಳಿ ಕೊಟ್ರೇಶ್, ಇಜಂತಕರ್ ಮಂಜುನಾಥ್, ರಾಘವೇಂದ್ರ ಶೆಟ್ಟಿ, ಯು.ಪಿ.ನಾಗರಾಜ್, ಮಂಜನಾಯ್ಕ, ಎಂ.ಮಲ್ಲೇಶ್, ಸಂತೋಷ್, ಆರ್. ಲೋಕೇಶ್, ನಿಟ್ಟೂರು ಸಣ್ಣಹಾಲಪ್ಪ, ಶಿರಗಾನಹಳ್ಳಿ ವಿಶ್ವನಾಥ್, ರಂಗಾಪುರ ಬಸವರಾಜ್, ವಿನಾಯಕ, ಉದಯ, ಕರೇಗೌಡ ಇದ್ದರು.