ದಾವಣಗೆರೆ: ಬಾಷಾ ನಗರದ 17ನೇ ಅಡ್ಡರಸ್ತೆಯಲ್ಲಿ ಚರಂಡಿ, ರಸ್ತೆ, ಬೀದಿ ದೀಪ ಹಾಗೂ ಇತರೆ ಮೂಲ ಸೌಕರ್ಯ ಕಲ್ಪಿಸಬೇಕು. ಶಾಂತಿನಗರದಲ್ಲಿ ಅವ್ಯವಸ್ಥೆ ಸರಿಪಡಿಸಬೇಕು ಆಗ್ರಹಿಸಿ ಸೋಷಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ-ಕಮ್ಯೂನಿಸ್ಟ್ (ಎಸ್ಯುಸಿಐ-ಸಿ) ವತಿಯಿಂದ ನಗರದ ಅಕ್ತರ್ ರಜಾ ಸರ್ಕಲ್ ಮತ್ತು ಶಾಂತಿನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ನಗರದಲ್ಲಾದ ವಿಪರೀತ ಮಳೆ ಪರಿಣಾಮದಿಂದಾಗಿ ನಗರದ ಹಲವಾರು ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಇತ್ಯಾದಿ ಮೂಲಭೂತ ಸಮಸ್ಯೆಗಳು ಜನಸಾಮಾನ್ಯರ ಜೀವನವನ್ನು ಹೈರಣಾಗಿಸಿವೆ. ಮಳೆಯಿಂದಾಗಿ ಚರಂಡಿ ನೀರು ಮನೆಯೊಳಗೆ ನುಗ್ಗಿದೆ. ಮನೆಗಳು, ಕಟ್ಟಡ ಸಡಿಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಂಗಾರು ಮಳೆ ಪ್ರಾರಂಭವಾಗಲಿದೆ. ಸ್ಮಾರ್ಟ್ಸಿಟಿ ಯೋಜನೆ ಅಥವಾ ಮಹಾನಗರ ಪಾಲಿಕೆಯಿಂದ ಈ ಕೂಡಲೇ ಚರಂಡಿಯ ಅವ್ಯವಸ್ಥೆಯನ್ನು ಸರಿಪಡಿಸಿ, ಮಳೆಯ ನೀರು ಮನೆಯ ಒಳಗೆ ನುಗ್ಗದಂತೆ ಕಾಮಗಾರಿಯನ್ನು ನಡೆಸಬೇಕು. ಕೊಳವೆಬಾವಿ ದುರಸ್ತಿಪಡಿಸಿ, ನೀರಿನ ವ್ಯವಸ್ಥೆ ಸರಿಪಡಿಸಬೇಕು. ಹಂದಿಗಳ ಉಪಟಳ ತಪ್ಪಿಸಬೇಕು. ಬೀದಿದೀಪಗಳನ್ನು ಸರಿಮಾಡಬೇಕು ಎಂದು ಆಗ್ರಹಿಸಿದರು.