ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕೃಷಿ ಸಮ್ಮಾನ್‌ಗೆ ತಾಂತ್ರಿಕ ದೋಷ

ಪೋಡ್‌, ಪೋತಿ, ಐಟಿ ಸಮಸ್ಯೆಗಳು ಕಾರಣವೆಂದ ಕೃಷಿ ಇಲಾಖೆ l 65 ಸಾವಿರ ರೈತರ ಖಾತೆ ಸೇರದ ಪ್ರೋತ್ಸಾಹಧನ
Last Updated 10 ಜನವರಿ 2022, 5:21 IST
ಅಕ್ಷರ ಗಾತ್ರ

ದಾವಣಗೆರೆ: ರೈತರನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಸಮ್ಮಾನ್‌ ಯೋಜನೆ ಈ ಬಾರಿ ಬಹಳ ಮಂದಿ ರೈತರ ಖಾತೆ ಸೇರಿಲ್ಲ. ‘ತಾಂತ್ರಿಕ’ ಸಮಸ್ಯೆಯೇ ಇದಕ್ಕೆ ಕಾರಣ ಎನ್ನುವುದು ಅಧಿಕಾರಿಗಳ ಉತ್ತರ. ಈ ‘ತಾಂತ್ರಿಕ’ ಕಾರಣಕ್ಕೆ ಜಿಲ್ಲೆಯಲ್ಲಿ 65 ಸಾವಿರ ರೈತರು ನಿರಾಶರಾಗಿದ್ದಾರೆ.

ಜಿಲ್ಲೆಗೆ ಕೃಷಿ ಸಮ್ಮಾನ್‌ ಪ್ರೋತ್ಸಾಹಧನವು ₹ 259 ಕೋಟಿ ಬಂದಿದೆ. 1.60 ಲಕ್ಷ ರೈತರಿಗೆ ಈ ಹಣ ಪಾವತಿಯಾಗಬೇಕು. ಅದರಲ್ಲಿ 95 ಸಾವಿರ ರೈತರ ಖಾತೆಗೆ ಜಮಾ ಆಗಿದೆ. ಪೋಡ್‌, ಪೋತಿ, ಆದಾಯ ತೆರಿಗೆ ಮುಂತಾದ ಕಾರಣಗಳಿಂದಾಗಿ 65 ಸಾವಿರ ರೈತರಿಗೆ ತಲುಪಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಅವರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಒಂದೇ ಕುಟುಂಬದಲ್ಲಿ ಇರುತ್ತಾರೆ. ಜಮೀನು ಪಾಲಾಗಿರುತ್ತದೆ. ಪೋಡ್‌ ಆಗಿರಲ್ಲ. ಕೆಲವರ ಆದಾಯ ಹೆಚ್ಚಿರುತ್ತದೆ. ಆದಾಯ ತೆರಿಗೆ ಕಟ್ಟಿರುತ್ತಾರೆ. ಇಂಥ ಹಲವು ಕಾರಣದಿಂದ ತಡೆ ಹಿಡಿಯಲಾಗಿರುತ್ತದೆ. ಬಹುತೇಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ನೀಡಬಹುದಾದ ಪ್ರಕರಣಗಳಾಗಿವೆ. ಸರಿಪಡಿಸಬಹುದಾದ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ ಎಂದು ತಿಳಿಸಿದರು.

ಬೆಳೆ ವಿಮೆ: ಬೆಳೆ ವಿಮೆಯ ಸಮಸ್ಯೆಯಾಗಿಲ್ಲ. ಈ ಬಾರಿಯ ನಷ್ಟ ಪರಿಹಾರ ಬಂದಿಲ್ಲ ಎಂಬ ಕಾರಣಕ್ಕೆ ರೈತರು ದೂರುತ್ತಿದ್ದಾರೆ. ಕಳೆದ ಮುಂಗಾರಿಗೆ ಉಂಟಾದ ನಷ್ಟ ಈಗ ಹಣ ಬಂದಿದೆ. ಈ ಬಾರಿ ಉಂಟಾದ ನಷ್ಟ ಮಾರ್ಚ್‌ ನಂತರ ಬರಲಿದೆ ಎಂದು ಚಿಂತಾಲ್‌ ಮಾಹಿತಿ ನೀಡಿದರು.

2020–21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 20,909 ವಿಮೆ ಕಟ್ಟಿದ್ದರು. 14,486 ಹೆಕ್ಟೇರ್‌ ಕೃಷಿಭೂಮಿ ವಿಮೆ ವ್ಯಾಪ್ತಿಗೆ ಒಳಪಟ್ಟಿತ್ತು. 2,945 ಹೆಕ್ಟೇರ್‌ ಭೂಮಿ ಪರಿಹಾರ ಪಡೆಯಲು ಅರ್ಹವಾಗಿತ್ತು. ₹ 4.90 ಕೋಟಿ ಪರಿಹಾರ ಪಾವತಿಯಾಗಿದೆ. 3393 ರೈತರು ಪರಿಹಾರ ಪಡೆದಿದ್ದರು. 2021–22ರ ಮುಂಗಾರಿನಲ್ಲಿ 21,514 ರೈತರು ವಿಮೆ ಕಟ್ಟಿದ್ದಾರೆ. 16,476 ಹೆಕ್ಟೇರ್‌ ಕೃಷಿ ಭೂಮಿ ವಿಮೆ ವ್ಯಾಪ್ತಿಗೆ ಬಂದಿದೆ. ಬೆಳೆನಷ್ಟ, ಪರಿಹಾರ ಲೆಕ್ಕಾಚಾರ ಇನ್ನಾಗಬೇಕಿದೆ ಎಂಬುದು ಅವರ ವಿವರಣೆ.

ಪ್ರಕೃತಿ ವಿಕೋಪದಿಂದ ಬೆಳೆಹಾನಿ: ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ನಾಶವಾದರೆ ಆಗ ಕಂದಾಯ ಇಲಾಖೆಯ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಯಾವ ಬೆಳೆ ಎಷ್ಟು ನಷ್ಟವಾಗಿದೆ ಎಂಬುದನ್ನು ಈ ಸಮೀಕ್ಷೆಯಲ್ಲಿ ಪತ್ತೆಹಚ್ಚಿ ಸರ್ಕಾರಕ್ಕೆ ನೀಡಲಾಗುತ್ತದೆ. ಈ ಬಾರಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಅಕಾಲಿಕ ಮಳೆಯಿಂದಾಗಿ ಭಾರಿ ಹಾನಿ ಉಂಟಾಗಿತ್ತು. ದಾವಣಗೆರೆ ತಾಲ್ಲೂಕಿನಲ್ಲಿ 2623 ರೈತರು ಮಳೆಯಿಂದ ಬೆಳೆ ಹಾನಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಪರಿಹಾರವು ನೇರವಾಗಿ ಅವರ ಖಾತೆಗಳಿಗೆ ಬರುತ್ತಿದೆ ಎಂದು ತಹಶೀಲ್ದಾರ್‌ ಬಿ.ಎನ್‌. ಗಿರೀಶ್‌ ತಿಳಿಸಿದರು.

ಬಿಡುಗಡೆಯಾಗದ ಬೆಳೆ ಹಾನಿ ಪರಿಹಾರ
-ಎಚ್.ವಿ. ನಟರಾಜ್
ಚನ್ನಗಿರಿ: ಅಕಾಲಿಕ ಮಳೆಗ ತಾಲ್ಲೂಕಿನಲ್ಲಿ 1,004 ಹೆಕ್ಟೇರ್ ಭತ್ತ, 12.5 ಹೆಕ್ಟೇರ್ ರಾಗಿ, 5 ಹೆಕ್ಟೇರ್ ಹತ್ತಿ ಹಾಗೂ 932 ಹೆಕ್ಟೇರ್ ಪ್ರದೇಶದಲ್ಲಿ ಫಸಲಿಗೆ ಬಂದಿದ್ದ ಮೆಕ್ಕೆಜೋಳ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿ ಹಾಳಾಗಿವೆ. ಸರ್ಕಾರ 1 ಹೆಕ್ಟೇರ್‌ ಮೆಕ್ಕೆಜೋಳಕ್ಕೆ ₹ 6,800 ಹಾಗೂ ಭತ್ತದ ಬೆಳೆಗೆ ₹ 13 ಸಾವಿರ ಪರಿಹಾರವನ್ನು ನಿಗದಿ ಮಾಡಿದೆ. ₹ 1.37 ಕೋಟಿ ಬೆಳೆ ಪರಿಹಾರ ಪ್ರಕೃತಿ ವಿಕೋಪ ಪರಿಹಾರ ಯೋಜನೆ ಅಡಿ ರೈತರಿಗೆ ಬರಬೇಕಾಗಿದೆ.

ಕೃಷಿ ಸಮ್ಮಾನ್ ಯೋಜನೆ ಅಡಿ ರೈತರಿಗೆ ಕೃಷಿ ಪ್ರೋತ್ಸಾಹಧನ ಕೇಂದ್ರ ಸರ್ಕಾರದ ಪಾಲು ₹ 51.86 ಕೋಟಿ ರೈತರ ಖಾತೆಗಳಿಗೆ ಜಮೆ ಆಗಿದೆ. ಒಟ್ಟು 2.61,104 ಫಲಾನುಭವಿ ರೈತರು ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಕೇವಲ 65,881 ಫಲಾನುಭವಿ ರೈತರಿಗೆ ₹ 13.81 ಕೋಟಿ ಪ್ರೋತ್ಸಾಹಧನವನ್ನು ಜಮೆ ಮಾಡಿದೆ. ಇ–ಕೆವೈಸಿ ಸಮಸ್ಯೆಯಿಂದಾಗಿ ಹಲವಾರು ರೈತರಿಗೆ ಹಣ ಬಂದಿಲ್ಲ.

ಫಸಲ್ ಬಿಮಾ ಯೋಜನೆ ಅಡಿ ಇದುವರೆಗೆ 2,336 ಫಲಾನುಭವಿ ರೈತರಿಗೆ ₹ 1.16 ಕೋಟಿ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ. ಇನ್ನು 1 ಸಾವಿರಕ್ಕಿಂತ ಹೆಚ್ಚು ರೈತರಿಗೆ ಹಣ ಬರಬೇಕಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಲ್ಲಾಡದ ತಿಳಿಸಿದರು.

ರೈತರು ತುಂಬಾ ಸಂಕಷ್ಟದಲ್ಲಿದ್ದು, ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಿ ರೈತರಿಗೆ ಆದ ನಷ್ಟವನ್ನು ಭರಿಸಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಾಗೇಂದ್ರಪ್ಪ ಒತ್ತಾಯಿಸಿದರು.

ಕೆಲವರಿಗಷ್ಟೇ ದಕ್ಕಿದ ಪರಿಹಾರ
-
ಡಿ.ಎಂ. ಹಾಲಾರಾಧ್ಯ
ನ್ಯಾಮತಿ: ಪ್ರಕೃತಿ ವಿಕೋಪದಿಂದ ಆದ ಬೆಳೆ ಪರಿಹಾರ ದಾಖಲೆ ಸರಿಯಾಗಿದ್ದ ರೈತರಿಗೆ ಸಿಕ್ಕಿದೆ. ಹಲವರಿಗೆ ಸಿಕ್ಕಿಲ್ಲ.

ತಾಲ್ಲೂಕಿನಲ್ಲಿ 2020–21ರಲ್ಲಿ 234 ರೈತರು, 133.6 ಹೆಕ್ಟೇರ್ ಜಮೀನಿಗೆ ₹ 2 ಲಕ್ಷ ವಂತಿಕೆ ನೀಡಿದ್ದು, ಬೆಳೆ ವಿಮಾ ನಷ್ಟ ಪರಿಹಾರ ₹ 2.3 ಲಕ್ಷ ಪರಿಹಾರ ಪಡೆದ ಫಲಾನುಭವಿಗಳು ಹಾಗೂ 2021–22ರಲ್ಲಿ 10,327 ರೈತರು, 1940.3 ಹೆಕ್ಟೇರ್, ರೈತರು ₹ 20.3 ಲಕ್ಷ ವಂತಿಕೆ ನೀಡಿದ್ದಾರೆ.

ರೈತರು ಕೊಡುವ ದಾಖಲೆಗಳು ಅಪೂರ್ಣ ಮತ್ತು ನಿಖರ ಮಾಹಿತಿ ಇಲ್ಲದೆ ಇರುವುದು (ಆಧಾರ್ ಹೆಸರು ತಪ್ಪಾಗಿರುವುದು), ನಿವೃತ್ತಿ ವೇತನ ಪಡೆಯುವವರು, ಆದಾಯ ತೆರಿಗೆ ಪಾವತಿದಾರರು, ಒಂದೇ ಕುಟುಂಬದಲ್ಲಿ ಹಲವರು ಅರ್ಜಿ ಸಲ್ಲಿಸಿರುವವರನ್ನು ತಂತ್ರಾಂಶದಲ್ಲಿ ಕಂಡುಬಂದಿದ್ದು, ಅವುಗಳ ಪರಿಶೀಲನೆ ನಡೆದಿದೆ. ಸರಿ ಇದ್ದವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿದೆ ಎಂದು ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಗೋವಿಂದನಾಯ್ಕ ಮಾಹಿತಿ ನೀಡಿದರು.

ಸರ್ಕಾರ ರೈತರಿಗೆ ಘೋಷಣೆ ಮಾಡುವ ಪರಿಹಾರ ಮೊತ್ತವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು ಎಂದು ರೈತ ಮುಖಂಡರಾದ ರಾಮೇಶ್ವರ ನಾಗರಾಜ, ಹೊಸಮನೆ ಮಲ್ಲಿಕಾರ್ಜುನ, ಸಹದೇವರೆಡ್ಡಿ, ಬೆಳಗುತ್ತಿ ಉಮೇಶ ಹೇಳಿದರು.

ಬರಪೀಡಿತ ತಾಲ್ಲೂಕಿನ ರೈತರಿಗಿಲ್ಲ ಪರಿಹಾರದ ಭಾಗ್ಯ
-
ಡಿ. ಶ್ರೀನಿವಾಸ್
ಜಗಳೂರು: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಹೈರಾಣಾಗಿರುವ ಬರಪೀಡಿತ ತಾಲ್ಲೂಕಿನ ಬಹುತೇಕ ರೈತರಿಗೆ ನೆರವಾಗಬೇಕಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಗಗನಕುಸುಮವಾಗಿವೆ. ಶೇ 75ರಷ್ಟು ರೈತರಿಗೆ ‍ಪರಿಹಾರದ ಹಣ ತಲುಪಿಲ್ಲ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 10ನೇ ಕಂತಿನಲ್ಲಿ ನೀಡುವ ತಲಾ ₹ 2 ಸಾವಿರ ಪ್ರೋತ್ಸಾಹಧನ ಸಾವಿರಾರು ರೈತರಿಗೆ ತಲುಪಿಲ್ಲ.

ಮೃತ ರೈತರ ಹೆಸರಿನಲ್ಲಿ ಪಹಣಿ ಇದ್ದಲ್ಲಿ, ಅವರ ವಾರಸುದಾರರಿಗೆ ಪರಿಹಾರ ಸಿಗುವುದಿಲ್ಲ. ಪಹಣಿ ಮತ್ತು ಆಧಾರ್ ಕಾರ್ಡ್‌ಗಳಲ್ಲಿ ಹೆಸರು, ತಂದೆ ಹೆಸರುಗಳಲ್ಲಿ ವ್ಯತ್ಯಾಸ ಹಾಗೂ ಫೆಬ್ರುವರಿ 1, 2019ರಿಂದ ಈಚೆಗೆ ಜಮೀನು ಖಾತೆ ಮಾಡಿಸಿಕೊಂಡವರಿಗೂ ತಾಂತ್ರಿಕ ಕಾರಣಗಳಿಂದ ಸಹ ಪರಿಹಾರ ಪಡೆಯಲು ಅಡ್ಡಿಯಾಗುತ್ತಿದೆ ಎಂದು ರೈತರು ದೂರುತ್ತಾರೆ.

‘ಪ್ರಧಾನ ಮಂತ್ರಿ ಕೃಷಿ ಸನ್ಮಾನ್ ಯೋಜನೆ ಹಾಗೂ ಮೆಕ್ಕೆಜೋಳ ಬೆಳೆನಷ್ಟ ಪರಿಹಾರ ಸೇರಿ ಯಾವುದೇ ಪರಿಹಾರ ನನಗೆ ಸಿಕ್ಕಿಲ್ಲ. ಕೆವೈಸಿ ಸೇರಿ ಎಲ್ಲ ದಾಖಲೆಗಳನ್ನು ಅಪ್‌ಡೇಟ್ ಮಾಡಿದ್ದರೂ ಪರಿಹಾರ ಕೈಗೆ ಸಿಕ್ಕಿಲ್ಲ’ ಎಂದು ತಾಲ್ಲೂಕಿನ ಬಂಗಹಾರಕ್ಕನಗುಡ್ಡ ಗ್ರಾಮದ ರೈತ ದೊಡ್ಡಬೋರಯ್ಯ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಸರ್ವೆ ಸಂಖ್ಯೆ ಬದಲಾವಣೆಯಾಗಿರುವ 8,126 ರೈತರು ಹಾಗೂ ಹೆಸರುಗಳಲ್ಲಿ ವ್ಯತ್ಯಾಸವಾಗಿರುವ 6,986 ರೈತರ ಜಮೀನುಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ತಾಂತ್ರಿಕ ಸಮಸ್ಯಾತ್ಮಕ ರೈತರ ಪಟ್ಟಿಯನ್ನು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರಗಳ ನಾಮಫಲಕಗಳಲ್ಲಿ ಪ್ರಕಟಿಸಲಾಗಿದ್ದು, ರೈತರು ಪ್ರಧಾನಮಂತ್ರಿ ಕಿಸಾನ್ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ-011-23381092 ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಕೃಷಿ ಸಹಾಯಕ ಕೃಷಿ ನಿರ್ದೇಶಕ ಬಿ.ವಿ. ಶ್ರೀನಿವಾಸುಲು ಮಾಹಿತಿ ನೀಡಿದರು.

ಫಸಲ್ ಬಿಮಾ ಯೋಜನೆ: ಈ ಯೋಜನೆಯಡಿ 2020-21‌ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,442 ರೈತರಿಗೆ ₹ 3.36 ಕೋಟಿ ವಿಮಾ ಪರಿಹಾರ ಹಾಗೂ ಹಿಂಗಾರಿನಲ್ಲಿ 112 ರೈತರಿಗೆ ₹ 12.23 ಲಕ್ಷ ಹಣ ವಿತರಿಸಲಾಗುತ್ತಿದೆ. 2021-22ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ 5,153 ರೈತರು ಹಾಗೂ ಹಿಂಗಾರು ಹಂಗಾಮಿನಲ್ಲಿ 1,443 ರೈತರುವಿಮೆ ಮಾಡಿಸಿದ್ದಾರೆ.

ಬೆಳೆನಷ್ಟ ಪರಿಹಾರ: ತಾಲ್ಲೂಕಿನ 345 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು, ಹಿಂಗಾರಿನಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ಶೇಂಗಾ ಹಾಗೂ 2800 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆನಷ್ಟವಾಗಿದ್ದು, ಎಲ್ಲ 5530 ರೈತರಿಗೆ ಪರಿಹಾರ ನೀಡಲಾಗಿದೆ ಎಂದು ಎಡಿಎ ಶ್ರೀನಿವಾಸುಲು ಹಾಗೂ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ ತಿಳಿಸಿದ್ದಾರೆ.

ಚಾತಕ ಪಕ್ಷಿಯಂತೆ ಕಾಯುತ್ತಿರುವ ರೈತರು
-ಎನ್‌.ಕೆ. ಆಂಜನೇಯ
ಹೊನ್ನಾಳಿ: ಒಂದೇ ಕುಟುಂಬದಲ್ಲಿ ಇಬ್ಬರು ಫಲಾನುಭವಿಗಳಿರುವುದು, ಪೌತಿಯಾಗಿರುವ ಪ್ರಕರಣಗಳು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ ರೈತರು, ಸರ್ಕಾರಿ ನೌಕರಿ ಇರುವವರು, ಭೂಮಿ ಮಿಸ್ ಮ್ಯಾಚ್ ಆಗಿರುವುದು ಮುಂತಾದ ಕಾರಣಗಳಿಗಾಗಿ ಈ ಬಾರಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕಂತು ಪಾವತಿ ವಿಳಂಬವಾಗಿದೆ. ಅವುಗಳನ್ನು ಪರಿಶೀಲನೆ ಮಾಡಿನಂತರ ಅರ್ಹ ಫಲಾನುಭವಿಗಳಿಗೆ ಪಾವತಿ ಮಾಡಲು ಕ್ರಮವಹಿಸಲಾಗುವುದು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ್ ತಿಳಿಸಿದರು.

ಫಸಲ್ ಬಿಮಾ ಯೋಜನೆಯಡಿ ಸ್ವಇಚ್ಛೆಯಿಂದ ಬೆಳೆ ವಿಮೆ ಕಂತುಪಾವತಿ ಮಾಡಿದ ರೈತರಿಗೆ ₹ 37.15 ಲಕ್ಷ ವಿಮಾ ಪರಿಹಾರ ಪಾವತಿಯಾಗಿದೆ. ಬೆಳೆನಷ್ಟಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಒಟ್ಟಾರೆ 3,200 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ ಎಂದು ಮಾಹಿತಿ ನೀಡಿದರು.

ರೈತರು ಆಧಾರ್ ಲಿಂಕ್ ಎನ್‍ಪಿಸಿಐ ಸೀಡಿಂಗ್ ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಕೆವೈಸಿ ಸಮಸ್ಯೆಗೆ ರೈತರು ಆಧಾರ್ ಕಾರ್ಡ್ ತಗೊಂಡು ಬ್ಯಾಂಕ್‌ಗೆ ಹೋಗಿ ಲಿಂಕ್ ಮಾಡಬೇಕು. ರೈತರು ತಮ್ಮ ಮೊಬೈಲ್‌ಗಳಲ್ಲಿಯೇ ಮಾಡಿಕೊಳ್ಳಬಹುದು. ಆದರೆ ಇದಕ್ಕೆ ಒಟಿಪಿ ಬರುತ್ತಿಲ್ಲ. ರೈತರು ಸಿಎಸ್‍ಸಿ ಸೆಂಟರ್‌ಳಿಗೆ ಹೋಗಿ ಸರಿಪಡಿಸಿಕೊಳ್ಳಬೇಕು ಎನ್ನುತ್ತಾರೆ ಅವರು.

ಸರ್ಕಾರದ ಲೋಪದೋಷಗಳು ಇದಕ್ಕೆ ಕಾರಣ. ಎಲ್ಲ ಕಡೆಗಳಲ್ಲಿ ಸಾಫ್ಟ್‌ವೇರ್ ಸಮಸ್ಯೆ ಇದೆ. ಆಧಾರ್ ಕಾರ್ಡ್ ತಿದ್ದುಪಡಿ ಸರಿಯಾಗಬೇಕು. ಮೊದಲು ಖಾಸಗಿ ಏಜೆನ್ಸಿಗೆ ಕೊಟ್ಟಿದ್ದರು. ಇದೀಗ ಸರ್ಕಾರ ವಹಿಸಿಕೊಂಡಿದೆ. ಸಾಫ್ಟ್‌ವೇರ್ ಗ್ರಾಮ ಪಂಚಾಯಿತಿ ಲೆವೆಲ್‌ನಲ್ಲಿ ಇಡಬೇಕು. ಲಕ್ಷಾಂತರ ರೈತರು ಆಧಾರ್ ಕಾರ್ಡ್ ತಿದ್ದುಪಡಿಗೆ ಸಮಯ, ಹಣ ವ್ಯಯ ಮಾಡುತ್ತಿದ್ದಾರೆ. ಅಪ್‍ಡೆಟ್ ಮಾಡಿಸಲು ₹ 200 ಕ್ಕೂ ಹೆಚ್ಚು ಹಣ ಕೇಳುತ್ತಾರೆ. ಉಚಿತವಾಗಿ ಮಾಡಬೇಕು ಎಂಬುದು ರೈತ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಅವರ ಒತ್ತಾಯವಾಗಿದೆ.

***

ಬೆಳೆ ವಿಮೆ ಸಮಸ್ಯೆ ಇಲ್ಲ. ಬೆಳೆ ನಷ್ಟವಾದವರಿಗೆ ಸಿಗುತ್ತದೆ. ಕೃಷಿ ಸಮ್ಮಾನ್‌ ಪ್ರೋತ್ಸಾಹಧನ ನೀಡಲು ಹಲವರ ದಾಖಲೆಗಳ ಹೊಂದಾಣಿಕೆ ಸಮಸ್ಯೆ ಇದೆ. ಅವುಗಳ ಪರಿಶೀಲನೆ ನಡೆಯುತ್ತಿದೆ.
-ಶ್ರೀನಿವಾಸ್‌ ಚಿಂತಾಲ್‌, ಜಂಟಿ ಕೃಷಿ ನಿರ್ದೇಶಕ, ದಾವಣಗೆರೆ

ಪ್ರಕೃತಿ ವಿಕೋಪದಿಂದ ನಷ್ಟ ಉಂಟಾದಾಗ ಸರ್ವೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕ ಮಂದಿಗೆ ಪರಿಹಾರ ಹಣ ಬಂದಿದೆ. ಬಾಕಿ ಉಳಿದವರಿಗೆ ಕೆಲವೇ ದಿನಗಳಲ್ಲಿ ಪಾವತಿಯಾಗಲಿದೆ.
-ಬಿ.ಎನ್‌. ಗಿರೀಶ್‌, ತಹಶೀಲ್ದಾರ್‌, ದಾವಣಗೆರೆ

ಸರಿಯಾಗದ ಸರ್ವರ್‌ ಸಮಸ್ಯೆ
ಕೃಷಿ ಸಮ್ಮಾನ್‌ ಯೋಜನೆಯ ಪ್ರೋತ್ಸಾಹಧನ ಹಿಂದೆ ಬಂದಿದೆ. ಆದರೆ ಈ ಬಾರಿ ಬಂದಿಲ್ಲ. ಕೇಳಿದರೆ ಇ–ಕೆವೈಸಿ ಆಗಿಲ್ಲ ಎಂದು ಸಬೂಬು ಹೇಳುತ್ತಾರೆ. ಆಧಾರ್‌ ಕಾರ್ಡ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಆಗಿದ್ದರೆ ಅವರಿಗೆ ಒಟಿಪಿ ಬರುತ್ತದೆಯಂತೆ. ನಮ್ಮದು ನಂಬರ್‌ ಲಿಂಕ್‌ ಆಗಿಲ್ಲ. ಆಗ ನಾವು ಬಯೋಮೆಟ್ರಿಕ್‌ ಥಂಬ್‌ ನೀಡಿ ಪಡೆದುಕೊಳ್ಳಬೇಕು. ಇಡೀ ದಿನ ಪ್ರಯತ್ನಿಸಿದರೂ ಬಯೋಮೆಟ್ರಿಕ್‌ ಆಗಿಲ್ಲ. ನೆಟ್‌ವರ್ಕ್‌ ಸರಿ ಇಲ್ಲ, ಸರ್ವರ್‌ ಡೌನ್‌ ಎಂದೆಲ್ಲ ಹೇಳುತ್ತಾರೆ. ಈ ಸಮಸ್ಯೆ ಯಾವಾಗ ಸರಿಪಡಿಸುತ್ತಾರೆ? ಯಾವಾಗ ಪ್ರೋತ್ಸಾಹಧನ ನೀಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ.
-ಎಸ್‌. ರೇವಣಸಿದ್ಧಪ್ಪ, ರೈತ, ಮಲೇಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT