ಹರಪನಹಳ್ಳಿ: ಸಾವಿರಾರು ಪಕ್ಷಿಗಳಿಗೆ ಆಶ್ರಯ, ಜನರಿಗೆ ನೆರಳು ಕೊಟ್ಟಿದ್ದ ಪಟ್ಟಣದ ಹೃದಯ ಭಾಗದಲ್ಲಿದ್ದ ಶತಮಾನದ ಅರಳಿಮರವೊಂದು ಮಳೆ, ಗಾಳಿಯಿಲ್ಲದಿದ್ದರೂ ಬುಡಸಮೇತ ಮೂರು ಭಾಗಗಳಾಗಿ ಧರೆಗುರುಳಿದೆ.
ಗೋಕರ್ಣೇಶ್ವರ ದೇವಸ್ಥಾನದ ಆವರಣವನ್ನೆಲ್ಲಾ ಆವರಿಸಿ ನೆರಳುಕೊಟ್ಟಿದ್ದ ಮರ, ಮೂರು ಬಲವಾದ ಬುಡಗಳಿಂದ ಬೇರೂರಿತ್ತು.
ಮರವು ಮೂರು ಭಾಗವಾಗಿ ನೆಲಕ್ಕಪ್ಪಳಿಸಿದೆ. ಮರದ ಸುತ್ತಲೂ ಕಟ್ಟಿದ್ದ ಕಟ್ಟೆಗೆ ಹಾನಿಯಾಗಿದೆ. ಈಶ್ವರ ದೇವಸ್ಥಾನಕ್ಕೆ ಯಾವುದೇ ಹಾನಿಯಾಗಿಲ್ಲ. ಯಾರ ಪ್ರಾಣಕ್ಕೂ ಅಪಾಯ ಉಂಟಾಗಿಲ್ಲ.
ಮರ ಬಿದ್ದಿರುವ ವಿಷಯ ಹರಡುತ್ತಿದ್ದಂತೆಯೇ ಸಾವಿರಾರು ಜನರು ತಂಡೋಪತಂಡವಾಗಿ ಆಗಮಿಸಿ ವೀಕ್ಷಿಸಿದರು. ಬಂದವರ ಪೈಕಿ ಕೆಲವರು ಯಾವುದೇ ಪ್ರಾಣಹಾನಿಯಾಗದೇ ಮರ ಬಿದ್ದಿದೆ ಅಂದರೆ ಇದು ಸ್ವಾಮಿಯ ಪವಾಡ ಎಂದೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.
ಭಾನುವಾರ ಬೆಳಿಗ್ಗೆಯಿಂದಲೇ ಬುಡದಲ್ಲಿ ಶಬ್ದ ಬರುತ್ತಿತ್ತು. ಮಧ್ಯಾಹ್ನದ ವೇಳೆಗೆ ಮರ ಬಿದ್ದಿದೆ. ಆ ಸಂದರ್ಭದಲ್ಲಿ ಮರದ ಕೆಳಗಡೆ ಯಾರೂ ಕುಳಿತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.