ದಾವಣಗೆರೆ: ‘ಅಧಿಕಾರಕ್ಕೆ ಬಂದರೆ ಗೋಹತ್ಯೆ ಮಸೂದೆ ರದ್ದುಗೊಳಿಸುತ್ತೇವೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹತಾಶರಾಗಿ ಹೇಳಿಕೆ ನೀಡಿದ್ದಾರೆ. ಮಸೂದೆ ರದ್ದುಗೊಳಿಸಲು ಅವರಸರ್ಕಾರ ಬಂದರೆ ತಾನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ತಿರುಗೇಟು ನೀಡಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯಅವರು ಅಧಿಕಾರಕ್ಕೆ ಬಂದಾಗ ಆ ಮಾತು ಹೇಳಲಿ.ಎರಡೂವರೆ ವರ್ಷ ಅಧಿಕಾರವಿದೆ.ಸುಭದ್ರವಾದ ಸರ್ಕಾರ ನಡೆಸುತ್ತೇವೆ.ಏನೇನು ಅಭಿವೃದ್ಧಿ ಕಾರ್ಯ ಮಾಡಬೇಕೋ ಎಲ್ಲವನ್ನೂ ಮಾಡುತ್ತೇವೆ’ ಎಂದರು.
‘ಬಿಜೆಪಿ ಸರ್ಕಾರ ಯಶಸ್ವಿಯಾಗಿ ಗೋಹತ್ಯೆ ನಿಯಂತ್ರಣ ಮಸೂದೆ ಜಾರಿಗೊಳಿಸಿದೆ.ಜನರು ಇದನ್ನು ಸ್ವಾಗತಿಸಿದ್ದಾರೆ. ಇದನ್ನು ಕಾಂಗ್ರೆಸ್ನವರು ವಿರೋಧಿಸುತ್ತಿದ್ದಾರೆ.ಇದು ಅವರ ನಿಲುವನ್ನು ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.
‘ಗೋಹತ್ಯೆ ನಿಷೇಧ ಮಸೂದೆಗೆ ಬೆಂಬಲ ನೀಡಿದ ಜೆಡಿಎಸ್ನ ಕೆಲವು ಶಾಸಕ ಮಿತ್ರರಿಗೆ ಧನ್ಯವಾದಗಳು. ಜೆಡಿಎಸ್ ಕಾಂಗ್ರೆಸ್ ಜತೆ ಹೋಗಿ ಕೈಸುಟ್ಟುಕೊಂಡಿದೆ. ಜೆಡಿಎಸ್ನವರಿಗೂ ಕಾಂಗ್ರೆಸ್ ಸ್ನೇಹದ ಏನು ಎಂಬುದು ಅರಿವಾಗಿದೆ.ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡೋಣ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.