ದಾವಣಗೆರೆ: ಒಡಿಶಾದ ಭುವನೇಶ್ವರದಲ್ಲಿ ಕಾಣೆಯಾಗಿರುವ ಕರ್ನಾಟಕ ಮೂಲದ ಇಬ್ರಾಹಿಂ ಷರೀಫ್ ಅವರನ್ನು ಕೂಡಲೇ ಪತ್ತೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ‘ಇಂಡಿಯನ್ ಬ್ಯೂರೋ ಆಫ್ ಸೈನ್ಸ್ ಅಸಿಸ್ಟೆಂಟ್ ಕಂಟ್ರೋಲರ್ ಆಗಿದ್ದ ಇಬ್ರಾಹಿಂ ಷರೀಫ್ ಒಬ್ಬ ದಕ್ಷ ಅಧಿಕಾರಿಯಾಗಿದ್ದರು. ಅಲ್ಲಿನ ಅಕ್ರಮ ಗಣಿಗಾರಿಕೆಯನ್ನು ಬಿಗಿ ಮಾಡಿದ್ದರು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರೇ ಇಬ್ರಾಹಿಂ ಅವರನ್ನು ಅಪಹರಿಸಿರುವ ಸಾಧ್ಯತೆ ಇದೆ. ಕೂಡಲೇ, ಸರ್ಕಾರ ನೇತೃತ್ವ ವಹಿಸಿ ಇಬ್ರಾಹಿಂ ಪತ್ತೆ ಮಾಡುವಂತೆ ಕೇಂದ್ರಕ್ಕೆ ಒತ್ತಡ ಹೇರಬೇಕು’ ಎಂದು
ಒತ್ತಾಯಿಸಿದರು.
ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಉಪ ವಿಭಾಗಾಧಿಕಾರಿ ಎಸ್. ನಾಗರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆ.ಎಚ್. ಮಹಬೂಬ್, ಅಮ್ಜತ್ ಅಲಿ, ಸೈಯದ್ ಅಕ್ಬರ್, ಲಕ್ಷ್ಮಣ್ರಾವ್ ಸಾಲಂಕಿ, ತಿಮ್ಮಪ್ಪ ಪೂಜಾರ್, ಬಿ. ರುದ್ರೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.