ದಾವಣಗೆರೆ: ‘ಜಿಲ್ಲೆಯ ಎಲ್ಲಾ ತಾಲ್ಲೂಕು ಗಳಲ್ಲಿ ಬರ ಇದೆ. ಮುಂದೆ ಆರು ತಿಂಗಳು ಬರ ನಿರ್ವಹಣೆಯ ಸವಾಲು ಎದುರಾ ಗಲಿದೆ. ಅದಕ್ಕೆ ಈಗಲೇ ಪೂರ್ವಸಿದ್ಧತೆ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಅವರು ಮಾತನಾಡಿದರು.
ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ. ಕೃಷಿ ಹಾಗೂ ತೋಟಗಾ ರಿಕೆ ಬೆಳೆ ಉತ್ಪಾದನೆ ಕುಸಿತವಾಗಲಿದೆ. ಜನರಿಗೆ ಉದ್ಯೋಗವೂ ಸಿಗುವುದಿಲ್ಲ.
ಯಾವ ವರ್ಷವೂ ಈ ರೀತಿ ಬರ ಎದುರಾಗಿರಲಿಲ್ಲ. ಜನರಿಗೆ ಮೂಲ ಸೌಕ ರ್ಯಗಳನ್ನು ಒದಗಿಸುವ ಸವಾಲು ಕೂಡ ಎದುರಾಗಲಿದೆ ಎಂದು ಹೇಳಿದರು.
ಬರ ನಿರ್ವಹಣೆ ಹಿನ್ನೆಲೆಯಲ್ಲಿ ಯಾವ ಇಲಾಖೆ ಕೂಡ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂಬುದನ್ನು ಈಗಲೇ ಗುರುತಿಸಿ, ಪ್ರಗತಿ ಸಾಧಿಸುವ ಬಗ್ಗೆ ಗಮನ ಹರಿಸಬೇಕು ಎಂದರು.
ಮಾರ್ಚ್ ಒಳಗೆ ಶೇ 100ರಷ್ಟು ಅನುದಾನ ಖರ್ಚು ಮಾಡಿದರೆ ಈ ಬಾರಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಸಿಗಲಿದೆ. ಹಾಗಾಗಿ, ತ್ವರಿತಗತಿ ಯಲ್ಲಿ ಬರ ಸಂಬಂಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.
ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಡಾ.ಸದಾಶಿವ, ಅನಾವೃಷ್ಟಿಯಿಂದಾಗಿ ಈ ಬಾರಿ ಜಿಲ್ಲೆಯಲ್ಲಿ ಶೇ 80ರಷ್ಟು ಬೆಳೆ ನಷ್ಟವಾಗಿದೆ. ಶೇಂಗಾ ಬೆಳೆ ಶೇ 90ರಷ್ಟು, ಮೆಕ್ಕೆಜೋಳ ಬೆಳೆ ಶೇ 50ರಷ್ಟು ನಷ್ಟವಾಗಿದೆ ಎಂದರು.
‘ಬೆಳೆ ನಷ್ಟಕ್ಕೆ ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ಕೈಗೊಳ್ಳಿ; ಇನ್ಪುಟ್ ಸಬ್ಸಿಡಿ ಅನುದಾನವನ್ನೂ ಶೀಘ್ರ ರೈತರಿಗೆ ವಿತರಿಸಿ’ ಎಂದರು.
‘ಈಚೆಗೆ ಜಿಲ್ಲೆಗೆ ಬಂದ ಸಚಿವ ಸಂಪುಟ ಉಪಸಮಿತಿ ಬರ ಅಧ್ಯಯನ ನಡೆಸಿದಾಗ ರೈತರು ಟೊಮೊಟೊ ಕೀಳದೆ ಹೊಲದಲ್ಲೇ ಬಿಟ್ಟಿರುವುದು ಕಂಡುಬಂತು. ಟೊಮೊಟೊ ಬೆಳೆದ ರೈತರಿಗೆ ಯಾವ ರೀತಿ ಪರಿಹಾರ ನೀಡುತ್ತೀರಿ’ ಎಂದು ತೋಟಗಾರಿಕಾ ಉಪನಿರ್ದೇಶಕ ವೇದಮೂರ್ತಿ ಅವರನ್ನು ಪ್ರಶ್ನಿಸಿದರು.
ಪ್ರತಿಕ್ರಿಯಿಸಿದ ವೇದಮೂರ್ತಿ, ಟೊಮೊಟೊ ಬೆಳೆಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿಲ್ಲ. ಆದರೆ, ಇನ್ಪುಟ್ ಸಬ್ಸಿಡಿ ಅನುದಾನ ನೀಡಲು ಸಿದ್ಧತೆ ನಡೆಸಿದೆ ಎಂದರು.
ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ 25 ಸಾವಿರ ರೈತರು ಕೃಷಿ ಬೆಳೆ ವಿಮೆ ಮಾಡಿಸಿದ್ದಾರೆ. ಕಳೆದ ವರ್ಷ ಇದೇ ಹಂಗಾಮಿನಲ್ಲಿ 17 ಸಾವಿರ ಸಂಖ್ಯೆ ಇತ್ತು ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಸದಾಶಿವ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಜಿ.ಎಸ್.ಷಡಕ್ಷರಪ್ಪ ಮಾತ ನಾಡಿ, ಜಿಲ್ಲೆಗೆ ಈ ಬಾರಿ 42 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಕೃಷಿ ಹೊಂಡ ನಿರ್ಮಾಣದ ಬಗ್ಗೆ ರೈತರೇ ಆಸಕ್ತಿ ವಹಿಸುತ್ತಿಲ್ಲ ಎಂದರು.
‘ಖಾತ್ರಿ ಯೋಜನೆಯಡಿ ಕೆಲಸ ಕೇಳಿ ಬರುವ ಜನರಿಗೆ ಯಾವ ಕಾರಣಕ್ಕೂ ಉದ್ಯೋಗ ನಿರಾಕರಿಸುವಂತಿಲ್ಲ’ ಎಂದು ಉಮಾಶಂಕರ್ ಹೇಳಿದರು.
ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಸ್ಥಳ ಗುರುತಿ ಸಲಾಗಿದೆ ಎಂದು ಪಶು ಸಂಗೋಪಾನೆ ಇಲಾಖೆ ಉಪನಿರ್ದೇಶಕ ಜಯಣ್ಣ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಉಮಾ ಎಂ.ಪಿ.ರಮೇಶ್ ಉಪಸ್ಥಿತರಿದ್ದರು.
**
ಟ್ಯಾಂಕರ್ ನೀರಿಗೆ ಬಾಡಿಗೆ ಹೆಚ್ಚು: ಆಕ್ಷೇಪ
ಖಾಸಗಿ ಕೊಳವೆಬಾವಿಯಿಂದ ಪಡೆಯುವ ನೀರಿಗೆ ಹೆಚ್ಚಿನ ದರ ನೀಡುತ್ತಿರುವ ಜಿಲ್ಲಾಡಳಿತದ ಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಬೇರೆ ಜಿಲ್ಲೆಗಳಲ್ಲಿ ಟ್ಯಾಂಕರ್ವೊಂದಕ್ಕೆ ₹400ರಿಂದ ₹600 ರ ಒಳಗೆ ನೀಡುವಾಗ ಇಲ್ಲಿ ದುಬಾರಿ ಬಾಡಿಗೆ ಏಕೆ ಎಂದು ಅವರು ಪ್ರಶ್ನಿಸಿದರು.
ಅಲ್ಲದೇ, ರಾಜ್ಯದ ಹಲವು ಕಡೆ ತಿಂಗಳಿಗೆ ₹ 20ಸಾವಿರ ಬಾಡಿಗೆ ನಿಗದಿಪಡಿಸಿ, ಕೊಳವೆಬಾವಿಯಿಂದ ನೀರು ಪಡೆಯಲಾಗುತ್ತಿದೆ. ಇದೇ ಕ್ರಮ ಇಲ್ಲಿಯೂ ಅನುಸರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ‘ಜಿಲ್ಲೆಯಲ್ಲೂ ಇದೇ ಕ್ರಮ ಅನುಸರಿಸಲಾಗಿದೆ. ಎಷ್ಟೇ ಟ್ಯಾಂಕರ್ ತೆಗೆದುಕೊಂಡರೂ ಒಂದು ಬಾವಿಗೆ ತಿಂಗಳ ಬಾಡಿಗೆ ₹ 20 ಸಾವಿರ ಮೀರದಂತೆ ನಿರ್ಬಂಧಿಸಲಾಗಿದೆ’ ಎಂದರು.
ದಾವಣಗೆರೆ ತಾಲ್ಲೂಕು ಪಂಚಾಯ್ತಿ ಇಒ ಎಲ್.ಎಸ್. ಪ್ರಭುದೇವ ಮಾತನಾಡಿ, ಕುರುಡಿ ಸುತ್ತಮುತ್ತ ಗ್ರಾಮದಲ್ಲಿ ನೀರಿನ ಯಾವುದೇ ಮೂಲ ಇಲ್ಲ. ಹಾಗಾಗಿ, ದೂರದ ಸ್ಥಳಗಳಿಂದ ನೀರು ಸರಬರಾಜು ಮಾಡಬೇಕಾಗಿದ್ದರಿಂದ ಅನಿವಾರ್ಯವಾಗಿ ಹೆಚ್ಚಿನ ಮೊತ್ತ ಭರಿಸಬೇಕಾಗಿದೆ ಎಂದು ಸಮಜಾಯಿಷಿ ನೀಡಿದರು.
ಈ ಬಗ್ಗೆ ಇನ್ನಷ್ಟು ಪರಿಶೀಲಿಸಿ ಬಾಡಿಗೆ ಪಾವತಿಸಿ ಎಂದು ಉಸ್ತುವಾರಿ ಕಾರ್ಯದರ್ಶಿ, ಸಿಇಒ ಎಸ್.ಅಶ್ವತಿ ಅವರಿಗೆ ಸೂಚಿಸಿದರು.
**
‘ಖಾತ್ರಿ’ ಯೋಜನೆಯಡಿ ತಾಲ್ಲೂಕಿನಲ್ಲೊಂದು ಸ್ಮಶಾನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಗುರಿ ಹೊಂದಿ.
–ಎಸ್.ಆರ್.ಉಮಾಶಂಕರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ