ಸಂತೇಬೆನ್ನೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿನ ಗ್ರಾಮದ ತೆರೆದ ಬಾವಿಯನ್ನು ಭಾನುವಾರ ಸ್ವಚ್ಛತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಏ. 14ರಂದು ಬಾವಿ ದುಸ್ಥಿತಿಯ ಬಗ್ಗೆ `ಪ್ರಜಾವಾಣಿ' ವರದಿ ಪ್ರಕಟಿಸಲಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಗ್ರಾಮ ಪಂಚಾಯ್ತಿ ಸ್ವಚ್ಛತೆಗೆ ಕ್ರಮ ಕೈಗೊಂಡಿದೆ. ಬರಗಾಲದಲ್ಲಿಯೂ 40 ಅಡಿ ನೀರು ತುಂಬಿದ ಸಿಹಿನೀರಿನ ಬಾವಿ ಸಾರ್ವಜನಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯ್ತಿ ಆದೇಶದ ಮೇರೆಗೆ ಯುವಕರ ಗುಂಪು ಬಾವಿಗಿಳಿದು ಪೊದೆಯಾಗಿ ಬೆಳೆದ ಆಲದ ಮರಗಳನ್ನು ತೆರವುಗೊಳಿಸಿದರು. ಟ್ರ್ಯಾಕ್ಟರ್ನ ಟ್ಯೂಬ್ಗೆ ಗಾಳಿ ತುಂಬಿ ನೀರಿಗಿಳಿದು ಪ್ಲಾಸ್ಟಿಕ್ ಹಾಗೂ ಇತರೆ ಬಾಹ್ಯ ತ್ಯಾಜ್ಯಗಳನ್ನು ಹೊರತೆಗೆದರು.
ಸ್ವಚ್ಛತೆ ಕಾಮಗಾರಿಗೆ ಸುತ್ತಲಿನ ಬಡಾವಣೆಯ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಶುದ್ಧ ನೀರಿಗೆ ಹೆಚ್ಚಿನ ಕಾಮಗಾರಿ ನಡೆಸಲಾಗುವುದು ಎಂದು ಪಿಡಿಒ ಗೋಪಾಲಕೃಷ್ಣ ತಿಳಿಸಿದರು.