ದಾವಣಗೆರೆ: ಬಗರ್ಹುಕ್ಕುಂ ಸಾಗುವಳಿದಾರರ ಜಮೀನಿನಲ್ಲಿ ಗಾಳಿಯಂತ್ರ ಅಳವಡಿಸಿರುವುದನ್ನು ವಿರೋಧಿಸಿ ಹರಪನಹಳ್ಳಿ ಪಟ್ಟಣದ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸಮೀಪದ ಸರ್ವೇನಂಬರ್ 492ರಲ್ಲಿ 2,315 ಎಕರೆ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ವಿದ್ಯುತ್ ಉತ್ಪಾದನೆಗಾಗಿ ಗಾಳಿಯಂತ್ರ ಅಳವಡಿಸುತ್ತಿರುವ ಕಾರಣ ಮೂರು ತಲೆ ಮಾರಿನಿಂದ ಜಮೀನು ನಂಬಿ ಬದುಕು ನಡೆಸುತ್ತಿರುವ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ದೂರಿದರು.
ಕೇಂದ್ರ ಸರ್ಕಾರ ಈಚೆಗೆ ಆದಿವಾಸಿಗಳಿಗೆ 10 ಹಾಗೂ ಪರಿಶಿಷ್ಟ ಪಂಗಡಕ್ಕೆ 2.20 ಎಕರೆ ಜಮೀನು ನೀಡಬೇಕು ಎಂದು ಕಾನೂನು ಮಾಡಿದೆ. ಆದರೆ, ಕಂದಾಯ ಇಲಾಖೆ ಗಾಳಿಯಂತ್ರ ಅಳವಡಿಸಲು ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಿಲ್ಲ. ಸರ್ಕಾರಕ್ಕೆ ತಪ್ಪು ಮಾಹಿತಿಕೊಟ್ಟು, ಉಳುಮೆ ಭೂಮಿಯನ್ನು ಖಾಸಗಿಯವರಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ರೈತರಾದ ದ್ಯಾಮಜ್ಜಿ ಹನುಮಂತಪ್ಪ, ಸಣ್ಣ ಹಾಲಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್ ಮತ್ತಿತರರು ಹಾಜರಿದ್ದರು.