ಹುಬ್ಬಳ್ಳಿ: ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಭ್ರಷ್ಟಾಚಾರ ವಿರೋಧಿ ಜನಾಂದೋಲನ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಧರಣಿ ನಡೆಸಿದರು.
ತಹಶೀಲ್ದಾರ್ ಕಚೇರಿ ಎದುರು ಒಂದು ದಿನದ ಧರಣಿ ನಡೆಸಿದ ಹೋರಾಟಗಾರರು ಲೋಕಪಾಲ್ ಮಸೂದೆ ಜಾರಿಗೆ ತರಬೇಕು. ಲೋಕಾಯುಕ್ತರನ್ನು ನೇಮಿಸಬೇಕು. ಸ್ವಾಮಿನಾಥನ್ ವರದಿ ಶಿಫಾರಸು ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರ ಅಮೃತ ಇಜಾರಿ ಮಾತನಾಡಿ ‘ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ನಾಲ್ಕು ದಶಕ ಹೋರಾಟ ಮಾಡಿದ್ದರಿಂದ ಲೋಕಪಾಲ್ ಮಸೂದೆ ಸಂಸತ್ತಿನಲ್ಲಿ ಅನುಮೋದನೆಗೊಂಡಿದೆ. ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಬೇಕು. ಈ ಬೇಡಿಕೆಗಳನ್ನು ಈಡೇರಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ಅಣ್ಣಾ ಹಜಾರೆ ಅವರು ಕೇಂದ್ರಕ್ಕೆ ಬರೆದ 36 ಪತ್ರಗಳಿಗೆ ಪ್ರಧಾನಿ ಕಾರ್ಯಾಲಯ ಉತ್ತರಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಹೋರಾಟ ಚುರುಕುಗೊಳಿಸಲಾಗುವುದು’ ಎಂದರು.
ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ‘ಮಹದಾಯಿ, ಕಳಸಾ ಬಂಡೂರಿ ಕಾಮಗಾರಿ ತುರ್ತಾಗಿ ಆರಂಭಿಸಬೇಕು’ ಎಂದು ಆಗ್ರಹಿಸಿದರು. ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಧರಣಿ ನಿರತ ಸ್ಥಳಕ್ಕೆ ಬಂದು ಬೆಂಬಲ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಪ್ರಮುಖರಾದ ರಾಮ್ ನಾಯಕ್, ಪುಟ್ಟಪ್ಪ ಜಾಧವ್, ಎಂ.ಡಿ. ಚಿಕ್ಕಣ್ಣವರ, ಬಸಪ್ಪ ಬೀರಣ್ಣವರ, ವಿನಯ ಗೋಕಾವಿ ಇದ್ದರು.