ಧಾರವಾಡ: ‘ರಾಜ್ಯದ 1.30 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆ ತಲುಪಿದೆ. ಸಿದ್ದರಾಮಯ್ಯ ಅವರಿಗೆ ಬಡವರ ಕಷ್ಟ ಗೊತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಆಶಯದಲ್ಲಿ ಕಾರ್ಯನಿರ್ವಹಿಸುತ್ತಿದ್ಧಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡದ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಿದ್ದರಾಮಯ್ಯ ಜನ್ಮದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒಟ್ಟು ₹ 60 ಸಾವಿರ ಕೋಟಿ ಬೇಕು. ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ರೈತರಿಗೆ ಬಡ್ಡಿ ರಹಿತವಾಗಿ ₹5 ಲಕ್ಷದವರೆಗೆ , ವಾರ್ಷಿಕ ಶೇ 3 ಬಡ್ಡಿದರದಲ್ಲಿ ₹ 15 ಲಕ್ಷದವರೆಗೆ ಸಾಲ ಒದಗಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಹೇಳಿದರು.
‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಆಹಾರ ಭದ್ರತೆ ಕಾಯ್ದೆ ಜಾರಿಗೊಳಿಸಲಾಯಿತು. ಈ ಕಾಯ್ದೆಯಡಿ ರಾಜ್ಯಕ್ಕೆ ಅಕ್ಕಿ ಪೂರೈಕೆಯಾಗುತ್ತಿದೆ. ಯುಪಿಎ ಸರ್ಕಾರ ಉದ್ಯೋಗ ಖಾತ್ರಿ ಜಾರಿಗೊಳಿಸಿತ್ತು. 22 ಕೋಟಿ ಜನರು ಈ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಆರ್ಟಿಐ (ಶಿಕ್ಷಣ ಹಕ್ಕು ಕಾಯ್ದೆ) ಜಾರಿಗೊಳಿಸಿದ್ದೂ ಯಪಿಎ ಸರ್ಕಾರ: ಎಂದು ಹೇಳಿದರು.
‘ಪ್ರಜಾಪ್ರಭುತ್ವದಲ್ಲಿ ಬಡ ಕುಟುಂಬದವರು ಮುಖ್ಯಮಂತ್ರಿಯಾಗಲು ಅವಕಾಶ ಇದೆ ಎಂಬುದುಕ್ಕೆ ಸಿದ್ದರಾಮಯ್ಯ, ಜೆ.ಎಚ್.ಪಟೇಲ್, ಬಿ.ಎಸ್.ಯಡಿಯೂರಪ್ಪ ಅವರೇ ಉದಾಹರಣೆ’ ಎಂದರು.
ಮುಖಂಡರಾದ ನಾಗರಾಜ್ ಗೌರಿ, ಹಜರತ್ ಅಲಿ ಗೊರವನಕೊಳ್ಳ, ದಾನಪ್ಪ ಕಬ್ಬೇರ, ಅನಿಲ ಪಾಟೀಲ್, ಅಲ್ತಾಫ್ ಹಳ್ಳೂರ, ಸುವರ್ಣ ಕಲ್ಲಕುಂಟ್ಲ, ದೀಪಕ್ ಚಿಂಚೋರೆ, ಇಸ್ಮಾಯಿಲ್ ತಮ್ಮಟಗಾರ, ಕವಿತಾ ಕಬ್ಬೇರ ಇದ್ದರು.