ದಾಂಡೇಲಿ: ವೈದ್ಯಕೀಯ ಪದವಿ ಪಡೆಯದೆ, ಆರೋಗ್ಯ ಇಲಾಖೆಯ ನಿಯಮ ಉಲ್ಲಂಘಿಸಿ ಆಸ್ಪತ್ರೆ ನಡೆಸುತ್ತಿರುವ ಖಾಸಗಿ ವೈದ್ಯರ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ನೇತೃತ್ವದ ತಂಡ ಶುಕ್ರವಾರ ನಗರದ ಮೂರು ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ, ನೋಟಿಸ್ ನೀಡಿದೆ.
ಕೋವಿಡ್ ಸಂದರ್ಭದಲ್ಲಿ ನೆಗಡಿ ,ಜ್ವರ, ಇತರೆ ಕಾಯಿಲೆಗೆ ಔಷಧಿ ನೀಡುತ್ತಿದ್ದು ಕೋವಿಡ್ ಲಕ್ಷಣಗಳಿದ್ದರೂ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸದೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದೂರು ಕೇಳಿ ಬಂದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ.
ನಗರದ ಚೌದರಿ ಗೇಟ್ ಬಳಿ ಇರುವ ರೆಹಮಾನ್ ಕ್ಲಿನಿಕ್ ಹಾಗೂ ಪ್ರವಾಸಿ ಮಂದಿರದ ಹತ್ತಿರ ಇರುವ ಸಾಂಬ್ರೇಕರ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಅಧಿಕೃತ ವೈದ್ಯಕೀಯ ಪ್ರಮಾಣಪತ್ರ ಇರಲಿಲ್ಲ. ಕ್ಲಿನಿಕ್ಗೆ ಬೀಗ ಜಡಿಯಲಾಗಿದೆ. ಕುಳಿಗಿ ರಸ್ತೆಯ ಹೆಗಡೆ ಕ್ಲಿನಿಕ್ ಮನೆಯಲ್ಲಿ ಫಲಕವನ್ನು ಹಾಕದೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಂದ ಅಪಾರ ಪ್ರಮಾಣದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕ್ಲಿನಿಕ್ನಲ್ಲಿ ಕೋವಿಡ್ ಪರೀಕ್ಷೆಗೆ ಬಳಸುತ್ತಿದ ಕಿಟ್ ದೊರೆತಿದ್ದು ಅಚ್ಚರಿ ಉಂಟುಮಾಡಿದೆ.
ಈ ಕ್ಲಿನಿಕ್ ವೈದ್ಯರು ಕೆಪಿಎಂಇ ಕಾಯ್ದೆಯನ್ವಯ ನೋಂದಾಯಿಸಿಕೊಳ್ಳಲು 2011ರಲ್ಲಿ ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಉತ್ತರ ಬಂದಿಲ್ಲ ಎನ್ನುತ್ತಾರೆ.
ತಹಶೀಲ್ದಾರ್ ಶೈಲೇಶ ಪರಮಾನಂದ, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ ಪ್ರಸಾದ, ಕಂದಾಯ ಇಲಾಖೆ ಅಧಿಕಾರಿ ಗೋಪಿ ಚವಾಣ್, ನಗರ ಪೊಲೀಸ್ ಠಾಣೆಯ ಪಿಎಸ್ಐ ಯಲ್ಲಪ ಎಸ್. ಪಾಲ್ಗೊಂಡಿದ್ದರು.
ತಾಲ್ಲೂಕು ವೈದ್ಯಾಧಿಕಾರಿ ಭೀಮಣ್ಣ ಶಿರೂರು ಪ್ರತಿಕ್ರಿಯಿಸಿ ‘ವೈದ್ಯಕೀಯವಾಗಿ ಅಧಿಕೃತವಲ್ಲದ ಮತ್ತು ನೋಂದಣಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯದೇ ಚಿಕಿತ್ಸೆ ನೀಡುವುದು ಕಾನೂನು ಬಾಹಿರ. ಹೋಮಿಯೋಪತಿ ಅಥವಾ ಅಲೋಪತಿ ಯಾವ ವೈದ್ಯ ಶಾಸ್ತ್ರದ ಅನುಮತಿ ಇದೆ ಅದನ್ನು ಮಾತ್ರವೇ ಬಳಸಬೇಕು. ನಾಟಿ ವೈದ್ಯ ಶಾಸ್ತ್ರ ಕಲಿತು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ‘ ಎಂದರು.