ಹುಬ್ಬಳ್ಳಿ: ‘ಹುಟ್ಟು–ಸಾವು, ಸುಖ–ದುಃಖ, ಸೋಲು–ಗೆಲುವಿನ ದ್ವಂದ್ವಗಳನ್ನು ದಾಟಿ, ಮನುಷ್ಯ ತನ್ನ ಮನಸ್ಸನ್ನು ಸಮಸ್ಥಿತಿಯಲ್ಲಿಟ್ಟುಕೊಂಡು ಬದುಕಲು ಬೇಕಾದ ತಾತ್ವಿಕ ದೃಷ್ಟಿಯನ್ನು ಭಗವದ್ಗೀತೆ ನೀಡುತ್ತದೆ’ ಎಂದು ವೇದ ಪಾಠಶಾಲೆಯ ಡಾ. ಕಂಠಪಲ್ಲಿ ಸಮೀರಣಾಚಾರ್ಯ ಅಭಿಪ್ರಾಯಪಟ್ಟರು.
ಭೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯಲ್ಲಿರುವ ಭವದ್ಗೀತಾ ದಿವ್ಯ ಕಲಾಲೋಕದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಭಾನುವಾರ ಹಮ್ಮಿಕೊಂಡಿದ್ದ, ಗೀತಾ ಜಯಂತಿ ಮಹೋತ್ಸವ ಸಪ್ತಾಹದ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಬ್ರಹ್ಮಕುಮಾರ ಬಸವರಾಜ ರಾಜಋಷಿ, ‘ಭಗವದ್ಗೀತೆಯು ಯೋಗಶಾಸ್ತ್ರವೂ ಹೌದು. ಅದರಲ್ಲಿ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಹಾಗೂ ರಾಜಯೋಗ ಗಳಿವೆ. ಎಲ್ಲಾ ವಯೋಮಾನ, ವರ್ಗ ಹಾಗೂ ಧರ್ಮದವರಿಗೂ ಗೀತೆಯು ಜ್ಞಾನದ ಮಾರ್ಗದರ್ಶನ ನೀಡುತ್ತದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮೌಂಟ್ ಅಬುವಿನ ರಾಜಯೋಗಿ ಬ್ರಹ್ಮಕುಮಾರ ಲಲಿತ್ ಭಾಯಿಜಿ, ‘ಭಗವದ್ಗೀತೆಯು ಜ್ಞಾನದ ಜೊತೆಗೆ ಜೀವನ ಮೌಲ್ಯಗಳನ್ನು ಕಲಿಸುತ್ತದೆ. ಅಂತಹ ಜ್ಞಾನವನ್ನು ಸರಳವಾಗಿ ಸಾಮಾನ್ಯರಿಗೂ ಸಿಗುವಂತೆ, ಬೊಂಬೆಗಳ ಮಾದರಿಯ ವಿಸ್ಮಯಕಾರಿ ಭಗವದ್ಗೀತೆ ಮ್ಯೂಸಿಯಂ ಅನ್ನು ಹುಬ್ಬಳ್ಳಿ ಯಲ್ಲಿ ಸ್ಥಾಪಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಹ್ಮಕುಮಾರಿ ನಿರ್ಮಲಾ ಜೀ ನಿರೂಪಣೆ ಮಾಡಿದರು. ಬ್ರಹ್ಮಕುಮಾರ ಆನಂದ ಸ್ವಾಗತಿಸಿದರು. ಬ್ರಹ್ಮಕುಮಾರಿ ಉಷಾ ಅಕ್ಕಾ, ಮೌಂಟ್ ಅಬುವಿನ ಕರುಣಾ ಬೆಹನ್ಜಿ, ಸಂದೀಪ್ ಭಾಯಿಜಿ ಹಾಗೂ ವಂದನಾ ಬೆಹನ್ಜೀ ಇದ್ದರು.