ಹುಬ್ಬಳ್ಳಿ: ನಗರದ ಉಣಕಲ್ ಕೆರೆ ಅಂಚಿನಲ್ಲಿ ಬೆಳೆದಿದ್ದ ಕಸವನ್ನು ಸ್ವಚ್ಛಗೊಳಿಸಲು ಜೆ.ಜಿ. ಕಾಮರ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾನುವಾರ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಸ್ವಚ್ಛತಾ ಶಿಬಿರ ಕಾರ್ಯಕ್ಕೆ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಕೂಡ ಕೈ ಜೋಡಿಸಿದರು.
ವಿದ್ಯಾರ್ಥಿಗಳ ಜೊತೆ ಜೆಡಿಎಸ್ ಮುಖಂಡ ರಾಜಣ್ಣ ಕೊರವಿ, ಪಾಲಿಕೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಕೆರೆಯ ಅಂಚಿನಲ್ಲಿ ಬೆಳೆದಿದ್ದ ಕಸ ಸ್ವಚ್ಛಗೊಳಿಸಿದರು.
ಕೆರೆ ಮುಂದಿನ ರಸ್ತೆಯ ಮಧ್ಯದಲ್ಲಿ ಬೆಳೆದಿರುವ ಕಸವನ್ನೂ ತೆಗೆದು ಹಾಕಿದರು. ಬಳಿಕ ಆಯುಕ್ತರು ಅಲ್ಲಿದ್ದ ಸಾರ್ವಜನಿಕರಿಗೆ ‘ಪ್ಲಾಸ್ಟಿಕ್ ಮುಕ್ತ ನಗರ ಮಾಡಬೇಕು ಎಂಬುದು ನಮ್ಮ ಗುರಿ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಕೆರೆಯ ಸುತ್ತಲೂ ಯಾರೂ ಕಸ ಹಾಗೂ ಪ್ಲಾಸ್ಟಿಕ್ ಎಸೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದರು.
ಉಣಕಲ್ ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ಯಾವಾಗ ತೆಗೆಯಲಾಗುತ್ತದೆ ಎನ್ನುವ ಪ್ರಶ್ನೆಗೆ ‘ಜಿಲ್ಲಾಧಿಕಾರಿಗಳು ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸೆ. 20ರ ಒಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ. ವರದಿ ಬಂದ ತಕ್ಷಣ ಸಮಗ್ರ ಯೋಜನೆ ರೂಪಿಸಿ ಹಂತಹಂತವಾಗಿ ಕಳೆ ತೆಗೆಯಲಾಗುವುದು. ಕೊಳಚೆ ನೀರು ಕೆರೆ ಸೇರದಂತೆ ಎಚ್ಚರ ವಹಿಸಲಾಗುವುದು’ ಎಂದು ತಿಳಿಸಿದರು.
ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್, ಪರಿಸರ ಅಧಿಕಾರಿಗಳಾದ ಟಿ.ಎನ್. ಶ್ರೀಧರ, ನಯನಾ, ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಸಿ. ಬೇವೂರ ಇದ್ದರು.