ಹಿರೇಕೆರೂರ: ತಾಲ್ಲೂಕಿನ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬಸವೇಶ್ವರ ಮತ್ತು ಬಹ್ರೇಶ್ವರ ದೇವರ ರಥೋತ್ಸವಕ್ಕೆ ಸಾಂಪ್ರದಾಯಿಕ ವಿಧಿಗಳು ಆರಂಭವಾಗಿವೆ.
ಚಾಲುಕ್ಯರ ವಾಸ್ತು ಶಿಲ್ಪದಲ್ಲಿ ಜಕಣಾಚಾರಿ ನಿರ್ಮಿಸಿರುವ ಇಲ್ಲಿನ ಸೋಮೇಶ್ವರ (ಬ್ರಹ್ಮೇಶ್ವರ) ಹಾಗೂ ಬಸವೇಶ್ವರ ದೇವರ ಭವ್ಯ ದೇವಸ್ಥಾನಗಳು ಕಲಾ ವೈಭವದಿಂದ ಕಂಗೊಳಿಸುತ್ತಿವೆ. ನಾಡಿನ ಇತಿಹಾಸವನ್ನು ಸಾರುವ ಶಿಲಾ ಶಾಸನಗಳು ಹಾಗೂ ಸುಂದರ ಶಿಲಾ ಮೂರ್ತಿಗಳ ಕೆತ್ತನೆ ಇಲ್ಲಿನ ವಿಶೇಷವಾಗಿದೆ.
ಕ್ರಿ.ಶ. 1636 ರಲ್ಲಿ ‘ಅಬಲೂರು ಚರಿತ್ರೆ’ ಎಂಬ ಗ್ರಂಥವನ್ನು ರಚಿಸಿದ ಶಾಂತ ನಿರಂಜನ ಕವಿಗಳು ಅಬಲೂರಿನ ಮೇಲೆ ಸಾಹಿತ್ಯಿಕ ಬೆಳಕು ಚೆಲ್ಲಿದ್ದಾರೆ. ಹಿಂದೂ ಧರ್ಮ ಜಾಗೃತಿಗೆ ಶರಣ ಚಳುವಳಿ ನಡೆಸಿ ಹಿಂದೂ ಧರ್ಮದ ತತ್ವವನ್ನು ಶಿರಸ್ ಪವಾಡದ ಮೂಲಕ ಜಗತ್ತಿಗೆ ತೋರಿಸಿದ ಏಕಾಂತ ರಾಮಯ್ಯನ ನೆಲೆಬೀಡು ಈ ಗ್ರಾಮ. ಹೀಗಾಗಿ ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಕಲ್ಲಿನ ಮೇಲೆ ಕೆತ್ತಿರುವ ಶಿರಸ್ ಪವಾಡದ ದೃಶ್ಯವನ್ನು ಇಂದಿಗೂ ಕಾಣಬಹುದಾಗಿದೆ.
ಬಸವೇಶ್ವರ, ಬ್ರಹ್ಮಲಿಂಗೇಶ್ವರ, ಸೋಮೇಶ್ವರ, ಆದಿನಾರಾಯಣ, ಸೂರ್ಯನಾರಾಯಣ, ಮಹಾಸರಸ್ವತಿ, ಗ್ರಾಮದೇವತೆ, ಉಡುಚಲಾಂಬ, ತೇರುಬಸವಾಂಬ ಮೂರ್ತಿಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು ಹಾಗೂ ಸುಮಾರು 21 ಶಿಲಾ ಶಾಸನಗಳು ಅಬಲೂರು ಗ್ರಾಮದ ಇತಿಹಾಸ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಾರುತ್ತವೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದ: ಅಬಲೂರು ಗ್ರಾಮದಲ್ಲಿ ಬಸವೇಶ್ವರ ಮತ್ತು ಬಹ್ರೇಶ್ವರ ಹಾಗೂ ಸಮೀಪದ ಯತ್ತಿನಹಳ್ಳಿ (ಎಂ.ಕೆ) ಗ್ರಾಮದ ಬ್ರಹ್ಮಲಿಂಗೇಶ್ವರ ರಥೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಫೆ.22 ರಂದು ಹೂವಿನ ರಥೋತ್ಸವ ನಡೆಯಲಿದ್ದು, ಅಂದು ರಾತ್ರಿ 11.15 ಗಂಟೆಗೆ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥಾರೋಹಣ ನಡೆಯುವುದು. ಫೆ.23ರಂದು ಶುಕ್ರವಾರ ದೊಡ್ಡ ರಥೋತ್ಸವ ಮತ್ತು ಗುಗ್ಗಳ ನಡೆಯಲಿದೆ. ಫೆ.24ರಂದು ಓಕಳಿ ಮತ್ತು ಬಂಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ.