ಹುಬ್ಬಳ್ಳಿ: ನೆಹರೂ ವ್ಯಕ್ತಿತ್ವಕ್ಕೆ ಕಳಂಕ ತರುವ ಕಾರ್ಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಘ ಪರಿವಾರ, ಬಿಜೆಪಿ ಮಾಡುತ್ತಿದೆ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ ಗೌರಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನೆಹರೂ ಅವರಿಗಿಂತ ವಲ್ಲಭಬಾಯಿ ಪಟೇಲ್ ಮೇಲೂ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಇಬ್ಬರೂ ಕಾಂಗ್ರೆಸ್ ನಾಯಕರು ಎಂಬುದನ್ನು ವಿರೋಧಿಗಳು ಅರಿಯಬೇಕು ಎಂದರು.
ಮುಖಂಡ ಶರಣಪ್ಪ ಕೊಟಗಿ ಮಾತನಾಡಿ, ಭಾರತದಂತಹ ಜಾತ್ಯತೀತ ರಾಷ್ಟ್ರಕ್ಕೆ ಇಂದು ನೆಹರೂ ಅವರಂತಹ ನಾಯಕರ ಅಗತ್ಯವಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂಡಿದ್ದ ಅವರು ಮುಂದಾಲೋಚನೆಯ ನಾಯಕರಾಗಿದ್ದರು ಎಂದರು.
ಮುಖಂಡ ಸದಾನಂದ ಡಂಗನವರ ಮಾತನಾಡಿ, ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕೆ ನೆಹರೂ ಭದ್ರ ಬುನಾದಿ ಹಾಕಿದರು. ನೆಹರೂ–ಪಟೇಲ್ ನಡುವೆ ಉತ್ತಮ ಬಾಂಧವ್ಯ ಇತ್ತು. ಆದರೆ, ಅವರ ನಡುವೆ ಭಿನ್ನಾಭಿಪ್ರಾಯವಿತ್ತು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ಯಾರು ಏನೇ ಮಾತನಾಡಿದರೂ ಇತಿಹಾಸ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಶಾಕೀರ್ ಸನದಿ ಮಾತನಾಡಿ, ನೆಹರೂ ಬರೆದಿರುವ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಪ್ರತಿಯೊಬ್ಬರೂ ಓದಿ ತಿಳಿದುಕೊಳ್ಳಬೇಕು. ನೆಹರೂ ಅಧ್ಯಯನಕ್ಕೆ ಯೋಗ್ಯವಾದ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಅಲ್ತಾಫ್ ಕಿತ್ತೂರ, ದಾಕ್ಷಾಯಿಣಿ ಬಸವರಾಜ, ದಶರಥ ವಾಲಿ, ನವೀದ್ ಮುಲ್ಲಾ, ಅಬ್ದುಲ್ ಗಣಿ, ಬಷೀರ್ ಅಹ್ಮದ್ ಗುಡಮಾಲ್ ಇದ್ದರು.