ಹುಬ್ಬಳ್ಳಿ: 'ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರು ಸಹ ಕೈ ಜೋಡಿಸಿದಾಗ ಸಮಾಜದಲ್ಲಿ ನಡೆಯುವ ಅಪರಾಧ ಚಟುವಟಿಕೆ ನಿಯತ್ರಿಸಲು ಸಾಧ್ಯ' ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕಾರವಾರ ರಸ್ತೆಯ ಹಳೇ ಸಿಎಆರ್ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸದ ಕಮಿಷನರೆಟ್ ಘಟಕದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
'ಪೊಲೀಸರು ಶಾಂತಿ-ಸುವ್ಯವಸ್ಥೆ ಕಾಪಾಡುವುದರ ಜೊತೆ, ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸೈಬರ್ ಕ್ರೈಂ, ಭಯೋತ್ಪಾದನೆಯಂಥ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಇವುಗಳ ನಿಗ್ರಹಕ್ಕೆ ಪೊಲೀಸ್ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಪೊಲೀಸ್ ಇಲಾಖೆ ಜೊತೆ ನಾಗರಿಕರು ಕೂಡಾ ಕೈ ಜೋಡಿಸಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂದಾಗಬೇಕು' ಎಂದರು.
'ಗಲಭೆ, ನಕ್ಸಲಿಸಂ, ಆಂತರಿಕ ಭದ್ರತೆ, ವಾಹನ ದಟ್ಟಣೆ, ಅಪರಾಧ ಕೃತ್ಯಗಳ ನಿಯಂತ್ರಣದ ಜವಾಬ್ದಾರಿ ಸಹ ಅವರದ್ದಾಗಿದೆ. ವಿವಿಧ ಇಲಾಖೆಗಳ ಸಮನ್ವಯದಿಂದ ಅವಳಿನಗರದಲ್ಲಿ ನಡೆಯಲಿರುವ ಸಂಭವನೀಯ ಸಾಕಷ್ಟು ಅಪರಾಧಗಳನ್ನು ನಿಯಂತ್ರಿಸಲಾಗಿದೆ' ಎಂದು ಹೇಳಿದರು.
ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, 'ಪ್ರಸ್ತುತ ವರ್ಷ ದೇಶದಲ್ಲಿ 189 ಪೊಲೀಸ್ ಸಿಬ್ಬಂದಿ, ರಾಜ್ಯದಲ್ಲಿ 16 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೃತಪಟ್ಟಿದ್ದಾರೆ. ಅವರ ಶೌರ್ಯ, ಕರ್ತವ್ಯನಿಷ್ಠೆ ಸದಾ ಸ್ಮರಣೀಯ' ಎಂದರು.
ಮೂರುಸುತ್ತು ಕುಶಾಲ ತೋಪು ಹಾರಿಸಿ, ಪೊಲೀಸ್ ವಾದ್ಯದ ಮೂಲಕ ರಾಷ್ಟ್ರಗೀತೆ ನುಡಿಸಿ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಲಾಯಿತು. ಎರಡು ನಿಮಿಷ ಮೌನಾಚರಿಸಿ, ಹುತಾತ್ಮರ ಆತ್ಮಕ್ಕೆ ಗೌರವ ಸಲ್ಲಿಸಿದರು.
ಆಂತರಿಕ ಭದ್ರತಾ ವಿಭಾಗದ ಐಜಿ(ಪೊಲೀಸ್ ಮಹಾ ನಿರೀಕ್ಷಕ)ವಿಪುಲ್ ಕುಮಾರ್, ಡಿಸಿಪಿಗಳಾದ ರಾಜೀವ್ ಎಂ., ರವೀಶ್ ಸಿ.ಆರ್., ಯಲ್ಲಪ್ಪ ಕಾಶಪ್ಪನವರ, ಉದ್ಯಮಿ ವಿ.ಎಸ್.ವಿ. ಪ್ರಸಾದ, ಐ.ಜಿ. ಸನದಿ, ಮಹೇಂದ್ರ ಸಿಂಘಿ, ಡಿ.ಕೆ. ಚವ್ಹಾಣ, ಸತೀಶ ಮೆಹರವಾಡೆ ಇದ್ದರು.