ಧಾರವಾಡ: ‘ತಾಕುಗಳನ್ನು ಉತ್ತಮವಾಗಿ ನಿರ್ವಹಿಸಿದಲ್ಲಿ ಮುಂಬರುವ ವರ್ಷಗಳಲ್ಲಿ ಆನ್ಲೈನ್ ಮೂಲಕ ದತ್ತಾಂಶ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು’ಎಂದುಭಾರತೀಯ ಕೃಷಿ ಅನುಸಂಧಾನ ಪರಿಷತ್ ವಾಣಿಜ್ಯ ಬೆಳೆ ವಿಭಾಗದ ಸಹಾಯಕ ಮಹಾ ನಿರ್ದೇಶಕ ಡಾ. ಆರ್.ಕೆ. ಸಿಂಗ್ ಹೇಳಿದರು.
ದೆಹಲಿ ಕೃಷಿ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಕಬ್ಬು ಸಂಶೋಧನೆ ಸಮನ್ವಯ ಯೋಜನೆ, ಲಕ್ನೋ ಕಬ್ಬು ಬೆಳೆ ಸಂಶೋಧನೆ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಬ್ಬು ಬೆಳೆ ವಾರ್ಷಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಆನ್ಲೈನ್ ದತ್ತಾಂಶ ಪ್ರಕ್ರಿಯೆಯಿಂದ ಸೂಕ್ತ ಸಮಯದಲ್ಲಿ ಅವಶ್ಯಕ ಮಾರ್ಗೋಪಾಯಗಳನ್ನು ಕಬ್ಬಿನ ಬೆಳೆಯಲ್ಲಿ ತೆಗೆದುಕೊಳ್ಳಲು ಸಾಧ್ಯ.ಕರ್ನಾಟಕದಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ವಿವಿಧ ಕಾರಣಗಳಿಂದಾಗಿ ಕಬ್ಬು ಉತ್ಪಾದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ರೈತರಿಗೆ ಹವಾಮಾನ ಆಧಾರಿತವಾದ ತಳಿಗಳನ್ನು ಶಿಪಾರಸ್ಸು ಮಾಡುವುದರಿಂದ ಆರ್ಥಿಕ ವೆಚ್ಚ ಕಡಿಮೆಯಾಗುತ್ತದೆ. ಮತ್ತು ರೈತರಿಗೆ ಹೆಚ್ಚು ಆದಾಯ ತರುತ್ತದೆ’ ಎಂದು ಹೇಳಿದರು.
ಲಕ್ನೋ ಭಾರತೀಯ ಕಬ್ಬು ಬೆಳೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎ.ಡಿ ಪಾಟಕ್ ಮಾತನಾಡಿ, ‘ಈ ವರ್ಷದ ಅಖಿಲ ಭಾರತ ಸಂಶೋಧನಾ ಯೋಜನೆ ಅಡಿಯಲ್ಲಿ ನಾಲ್ಕು ಉತ್ತಮ ಕಬ್ಬಿನ ತಳಿಗಳನ್ನು ಬಿಡುಗಡೆಗೊಳಿಸಲು ಅನುಮತಿ ನೀಡಲಾಗಿದೆ’ ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್.ಪಾಟೀಲ ಮಾತನಾಡಿ, ‘ರೈತರು ಮಣ್ಣಿನಲ್ಲಿ ಇರುವ ಇಂಗಾಲದ ಪ್ರಮಾಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು’ ಎಂದರು.
ಕಾರ್ಯಾಗಾರದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಮತ್ತು ಸಲಹೆಗಳ ಕುರಿತು ತಳಿ ಅಭಿವೃದ್ಧಿ ವಿಭಾಗದಿಂದ ಕೊಯಮತ್ತೂರು ಕಬ್ಬು ತಳಿ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಡಾ. ಭಕ್ಷಿರಾಮ, ಕಬ್ಬು ಬೇಸಾಯ ವಿಭಾಗದಿಂದ ಡಾ. ಟಿ.ಕೆ. ಶ್ರಿವಾತ್ಸವ, ಕಬ್ಬು ಸಸ್ಯ ರೋಗ ವಿಭಾಗದಿಂದ ಡಾ. ಆರ್. ವಿಶ್ವನಾಥನ್ ಮತ್ತು ಕಬ್ಬು ಕೀಟ ನಿರ್ವಹಣೆ ವಿಭಾಗದಿಂದ ಡಾ. ಎಂ.ಆರ್. ಸಿಂಗ್ ಪ್ರಸ್ತುತ ಪಡಿಸಿದರು.
ಉತ್ತಮ ಸಾಧನೆ ತೋರಿದ ದೇಶದ ಒಂಭತ್ತು ಕಬ್ಬು ಸಂಶೋಧನಾ ಕೇಂದ್ರಗಳಿಗೆ ಪ್ರಶಂಸನೀಯ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಕೇಶ್ವರ ಕಬ್ಬು ಸಂಶೋಧನಾ ಕೇಂದ್ರವೂ ಪ್ರಶಸ್ತಿ ಪಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.