ಹುಬ್ಬಳ್ಳಿ: ನಗರದ ಕೇಶ್ವಾಪುರ ಮತ್ತು ಸುಭಾಷನಗರದ ರಸ್ತೆಗಳ ಅಕ್ಕ–ಪಕ್ಕ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಅಂಗಡಿ ಮತ್ತು ಶೆಡ್ಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ಜೆಸಿಬಿಯಿಂದ ತೆರವುಗೊಳಿಸಿದರು.
ಕೇಶ್ವಾಪುರದ ಬಾರಾಕೊಟ್ರಿ ಪ್ರದೇಶದಲ್ಲಿ ₹35 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ರಸ್ತೆ ಪಕ್ಕ ಕೆಲವರು ಅನಧಿಕೃತವಾಗಿ ಶೆಡ್ ಮತ್ತು ಅಂಗಡಿಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಹಾಗೂ ವಾಸ್ತವ್ಯ ಮಾಡುತ್ತಿದ್ದರು. ಸುಭಾಷ್ ನಗರದ ಮುಖ್ಯರಸ್ತೆ ಅಕ್ಕಪಕ್ಕವೇ ಕೆಲವರು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಕೆಲವರು, ಕಟ್ಟಡ ಸಾಮಗ್ರಿಗಳನ್ನು ರಸ್ತೆಯಲ್ಲೇ ಸಂಗ್ರಹಿಸಿದ್ದರು. ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ತೆರವು ಮಾಡುವಂತೆ ಸಾಕಷ್ಟು ಬಾರಿ ಹೇಳಿದ್ದರೂ ಮಾಡಿರಲಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಕಾರ್ಯಚರಣೆಯಲ್ಲಿ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ವಲಯ ಅಧಿಕಾರಿ ಎಸ್.ಸಿ. ಬೇವೂರ, ಎಂಜಿನಿಯರ್ ಚೈತ್ರಾ ಸಾಲಿಮಠ, ವಿರೇಶ ಸವಡಿ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.