ಧಾರವಾಡ: ‘ಋತುಮತಿಯಾಗುವ ಪ್ರಕ್ರಿಯೆಯನ್ನು ಸಂಭ್ರಮಿಸುವ ಬದಲು, ಅವಮಾನ ಹಾಗೂ ಅಡೆತಡೆಗಳು ಎದುರಿಸಬೇಕಾಗಿದೆ. ಇದರಿಂದ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯಿಂದ ವಂಚಿತರನ್ನಾಗಿಸುತ್ತಿದೆ’ ಎಂದುಎಫ್ಪಿಎಐ ಶಾಖಾ ವ್ಯವಸ್ಥಾಪಕಿ ಸುಜಾತಾ ಆನಿಶೆಟ್ಟರ್ ಹೇಳಿದರು.
ವಿಶ್ವ ಮಾನವತ್ವ ದಿನಾಚರಣೆ ಅಂಗವಾಗಿ ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆ (ಎಫ್ಪಿಎಐ) ಮತ್ತು ಸಾಫಲ್ಯ ಬಹುಶಿಸ್ತೀಯ ಸಾಮಾಜಿಕ ಕಾರ್ಯಗಳ ಟ್ರಸ್ಟ್ ಆಶ್ರಯದಲ್ಲಿ ತಾಲ್ಲೂಕಿನ ಕಲಕೇರಿ ಹಾಗೂ ಹುಣಸಿಕುಮರಿ ಗ್ರಾಮಗಳ ಮಹಿಳೆಯರಿಗೆ ಪುನರ್ ಬಳಕೆಯ ಸ್ಯಾನಿಟರಿ ಪ್ಯಾಡ್ಗಳನ್ನು ಶುಕ್ರವಾರ ವಿತರಿಸಿ, ಮಾತನಾಡಿದರು.
‘ಮುಟ್ಟಿನ ಕುರಿತ ಅಪನಂಬಿಕೆಗಳು, ದೈಹಿಕ ಶುಚಿತ್ವಕ್ಕೆ ದಕ್ಕೆಯಾಗಿದೆ. ಇದರಿಂದ ಶಿಲೀಂಧ್ರ, ಮೂತ್ರಕೋಶ, ಗರ್ಭಾಶಯ ನಾಳದ ಸೋಂಕು, ಗರ್ಭಕೊರಳಿನ ಕ್ಯಾನ್ಸರ್ ಇತ್ಯಾದಿಗಳಿಗೂ ಕಾರಣವಾಗಬಹುದು.ಭಾರತದಲ್ಲಿ ಸ್ಯಾನಿಟರಿ ಪ್ಯಾಡ್ ಬಳಸುತ್ತಿರುವವರು 121 ದಶಲಕ್ಷ ಮಹಿಳೆಯರು ಮಾತ್ರ’ ಎಂದರು.
ಸಂಸ್ಥೆಯ ಮೌಲ್ಯಮಾಪನ ಅಧಿಕಾರಿ ಸುಮನ್ ಹೆಬ್ಳೀಕರ್ ಮಾತನಾಡಿ, ‘100 ಮಹಿಳೆಯರಿಗೆ ಬಟ್ಟೆಯಿಂದ ತಯಾರಿಸಿದ 200 ಸ್ಯಾನಿಟರಿ ಪ್ಯಾಡ್ಗಳನ್ನು ನೀಡಲಾಗುತ್ತಿದೆ. ಪರಿಸರ ಸ್ನೇಹಿ ಪ್ಯಾಡ್ ಬಳಸಿ ಸುರಕ್ಷಿತವಾಗಿರುವಂತೆ ಉತ್ತೇಜಿಸಲಾಗುತ್ತಿದೆ’ ಎಂದರು.
ಪ್ರಕಾಶ ಜೋಡಳ್ಳಿ, ಬಸಮ್ಮ ದೇಸಾಯಿ, ಸಂಗೀತಾ ಗೊರವನಕೊಳ್ಳ, ರುಕ್ಮಿಣಿ ರಾಟೊಳ್ಳಿ, ದಾಕ್ಷಾಯಿಣಿ ಇದ್ದರು.