ಹುಬ್ಬಳ್ಳಿ: ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಗಸ್ಟ್ 15ರಿಂದ ಅಕ್ಟೋಬರ್ 2ರ ವರೆಗೆ ದೇಶದಾದ್ಯಂತ ಹಮ್ಮಿಕೊಂಡಿರುವ ಫಿಟ್ ಇಂಡಿಯಾದ ಅಭಿಯಾನದ ಭಾಗವಾದ ‘ಫಿಟ್ ಇಂಡಿಯಾ ಫ್ರೀಡಮ್ ರನ್’ ಕಾರ್ಯಕ್ರಮ ಶನಿವಾರ ನೈರುತ್ಯ ರೈಲ್ವೆ ವತಿಯಿಂದ ನಡೆಯಿತು.
ಗದಗ ರಸ್ತೆಯಲ್ಲಿರುವ ರೈಲ್ವೆಯ ಕ್ರಿಕೆಟ್ ಮೈದಾನದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕುಟುಂಬದವರು ಓಡಿದರು. ಸುರಕ್ಷಿತ ಅಂತರ ಕಾಪಾಡಿಕೊಂಡು ಎಷ್ಟು ದೂರ ಓಡಬೇಕು, ಎಲ್ಲಿ ಓಡಬೇಕು ಎನ್ನುವುದನ್ನು ಓಡುವವರೇ ನಿರ್ಧರಿಸಬೇಕಿತ್ತು. ಒಮ್ಮೆ ಓಡಲು ಆರಂಭಿಸಿದರೆ ಗುರಿ ಮುಟ್ಟುವ ತನಕ ನಿಲ್ಲಿಸುವಂತಿಲ್ಲ ಎನ್ನುವ ನಿಯಮವಿತ್ತು.
ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ಮಾತನಾಡಿ ‘ಈಗಿನ ಬದುಕಿನಲ್ಲಿ ಫಿಟ್ನೆಸ್ ಅತ್ಯಂತ ಅಗತ್ಯವಾಗಿದೆ. ಓಟ ಬದುಕಿನ ಭಾಗವೇ ಆಗಿದೆ. ಸರ್ಕಾರದ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಕರೆ ನೀಡಿದರು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಮಾತನಾಡಿ ‘ಜೀವನದಲ್ಲಿ ಅಂದುಕೊಂಡ ಗುರಿ ಮುಟ್ಟಲು ಫಿಟ್ನೆಸ್ ಅಗತ್ಯ’ ಎಂದರು.
ನೈರುತ್ಯ ರೈಲ್ವೆಯ ಕ್ರೀಡಾ ಸಂಘದ ಅಧ್ಯಕ್ಷ ಎಸ್.ಎಸ್. ಕಟವಾರೆ ತಮ್ಮ ಸಿಬ್ಬಂದಿಗೆ ಏರೋಬಿಕ್ಸ್, ಫುಟ್ಬಾಲ್, ವಾಲಿಬಾಲ್, ಸ್ಕಿಪ್ಪಿಂಗ್ ಕ್ರೀಡೆಗಳನ್ನು ಆಯೋಜಿಸಿದ್ದರು.
ನೈರುತ್ಯ ರೈಲ್ವೆಯ ಮಹಿಳಾ ಕಲ್ಯಾಣ ಸಂಘಟನೆಯ ಅಧ್ಯಕ್ಷೆ ಸುಜಾತಾ ಸಿಂಗ್, ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಳಖೇಡ, ಹಿರಿಯ ಅಧಿಕಾರಿಗಳಾದ ರವಿಕುಮಾರ, ರೂಪಾ ಶ್ರೀನಿವಾಸ, ಅನಿಲ್ ಪವಿತ್ರನ್, ಡಾ. ವಿಲಾಸ ಗುಂಡಾ, ಎಂ.ಎ.ವಿ. ರಾಮಾನುಜಮ್ ಪಾಲ್ಗೊಂಡಿದ್ದರು.