ಹುಬ್ಬಳ್ಳಿ: ‘ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮದಿನದ ಅಂಗವಾಗಿ, ಭಗತ್ ಸಿಂಗ್ ಯೂಥ್ ಕ್ಲಬ್ ಹಾಗೂ ಮಹಾವೀರ ಸೇವಾ ಸಂಘದ ಸಹಯೋಗದಲ್ಲಿ ಅ.15ರಂದು ನಗರದ ಕುಸುಗಲ್ ರಸ್ತೆಯಲ್ಲಿರುವ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ’ ಎಂದು ಪಂದ್ಯಾವಳಿ ಸಂಯೋಜಕ ಚಂದ್ರಶೇಖರ ಗೋಕಾಕ ಹೇಳಿದರು.
‘ಯುವಕರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಉತ್ತೇಜನ ನೀಡುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಲೀಗ್ ಹಾಗೂ ನಾಕ್ ಔಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ’ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಶಾಸಕ ಜಗದೀಶ ಶೆಟ್ಟರ್ ಚಾಲನೆ ನೀಡಲಿದ್ದು, ತೇಜಸ್ ಗೋಕಾಕ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾವೀರ ಸೇವಾ ಸಂಘದ ಅಧ್ಯಕ್ಷ ಸುರೇಶ ಜೈನ್, ಆರ್.ಎನ್. ರಿಚರ್ಡ್, ದೀಪಕ ಬಾಬು, ಚೈತನ್ಯ ಇನಾಮದಾರ ಭಾಗವಹಿಸಲಿದ್ದಾರೆ’ ಎಂದರು.
ತೇಜಸ್ ಗೋಕಾಕ್, ಆರ್.ಎನ್. ರಿಚರ್ಡ್, ದೀಪಕ್ ಬಾಬು ಹಾಗೂ ಚೈತನ್ಯ ಇನಾಮದಾರ ಇದ್ದರು.