ಹುಬ್ಬಳ್ಳಿ:ಆಷಾಢ ಮಾಸದ ಅಂಗವಾಗಿ ನಗರದ ಕೆ.ಇ.ಬಿ ಹತ್ತಿರದ ಜೈಭೀಮ ನಗರದ ಮರಿಯಮ್ಮಾ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ಹಾಗೂ ಉಡಿ ತುಂಬಿ ಎಣ್ಣೆ ಕೊಡುವ ಕಾರ್ಯಕ್ರಮ ಮಂಗಳವಾರ ನಡೆಯಿತು.
ಬೆಳಿಗ್ಗೆ ದೇವಿಯರ ಮೂರ್ತಿಗಳಿಗೆ ಮಹಾಭಿಷೇಕ ಮತ್ತು ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಮಾತೋಶ್ರೀ ಅಮ್ಮನವರು ಚಾಲನೆ ನೀಡಿದರು.
ಬಮ್ಮಾಪೂರ ಓಣಿಯಲ್ಲಿರುವ ಗ್ರಾಮದೇವತೆಯರಾದ ದ್ಯಾಮವ್ವ ದೇವಿ ಮತ್ತು ದುರ್ಗವ್ವ ದೇವಿಗೆ ಉಡಿತುಂಬಿ ಎಣ್ಣೆ-ದೀಪ ಕೊಟ್ಟು ಪೂಜೆ ಮಾಡಲಾಯಿತು. ನಂತರ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿದ ನಂತರ, ಅನ್ನಸಂತರ್ಪಣೆ ಜರುಗಿತು.
ದೇವಸ್ಥಾನದ ಅಧ್ಯಕ್ಷ ವಿರುಪಾಕ್ಷಿ ಚಲವಾದಿ, ಬಿ.ಎಸ್. ಪಾಟೀಲ, ಯಲ್ಲಪ್ಪ ಯರಗುಪ್ಪಿ, ಶಿವಾನಂದ ಜೇಕಿನಕಟ್ಟಿ, ರವಿ ಅಮರಾವತಿ, ಬಸವರಾಜ ಕಠಾರೆ, ಶಿವಮೂರ್ತಿ ಚಲವಾದಿ, ಮಧುಪ್ರಕಾಶ ಗದಗ ಹಾಗೂ ಓಣಿಯ ಹಿರಿಯರು ಇದ್ದರು.