ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವವನ್ನು ನಗರದಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ಪರ ಸಂಘಟನೆಗಳು, ಶಾಲಾ– ಕಾಲೇಜುಗಳು ಹಾಗೂ ಸಾರ್ವಜನಿಕರು ಸಂಭ್ರಮದಿಂದ ಪಾಲ್ಗೊಂಡರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾಗಮಗೊಂಡ ಕನ್ನಡದ ಅಭಿಮಾನಿಗಳು, ಕನ್ನಡ ಬಾವುಟ ಬೀಸಿದರು. ಬೈಕ್, ಕಾರು, ಆಟೊ ಸೇರಿದಂತೆ ತಮ್ಮ ತಮ್ಮ ವಾಹನಗಳಲ್ಲಿ ಕನ್ನಡ ಬಾವುಟ ಹಾಕಿ ನಗರದಾದ್ಯಂತ ಸುತ್ತಾಡಿ ಸಂಭ್ರಮಿಸಿದರು.
ಚುಟುಕು ಸಾಹಿತ್ಯ ಪರಿಷತ್:
ರಾಜ್ಯೋತ್ಸವದ ಅಂಗವಾಗಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯು ಸುವರ್ಣ ಸಮ್ಮಾನ ಗೌರವ ಪ್ರಶಸ್ತಿ ಪ್ರದಾನ ಆಯೋಜಿಸಿತ್ತು.
ಪ್ರಶಸ್ತಿ ಸ್ವೀಕರಿಸಿದ ಶಿಕ್ಷಣ ತಜ್ಞ ಹಾಗೂ ನಿವೃತ್ತಿ ಉಪನಿರ್ದೇಶಕ ಶಿವಶಂಕರ ಹಿರೇಮಠ ಮಾತನಾಡಿ, ಏಕೀಕರಣ ಹಾಗೂ ನಾಮಕರಣಕ್ಕೆ ಬೆಂಗಳೂರು ಮೈಸೂರು ಪ್ರಾಂತದ ಜನ ವಿರೋಧ ವ್ಯಕ್ತಪಡಿಸಿದರು, ಹದಿನೇಳು ವರ್ಷದ ಹೋರಾಟದ ಫಲವಾಗಿ ದಿ.ದೇವರಾಜ ಅರಸು ಕರ್ನಾಟಕ ನಾಮಕರಣ ಮಾಡಿದರು ಎಂದರು.
ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಸಮಾರಂಭವನ್ನು ಉದ್ಘಾಟಿಸಿದರು. ಮಾಜಿ ಮೇಯರ್ ಪಾಂಡುರಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಕಟ್ಟಾಳು ದೇವಪ್ಪಜ್ಜ ಸಾನಿಧ್ಯದಲ್ಲಿ ಬರಹಗಾರ್ತಿ ಮಂಜುಳಾ ಡಿ.ಕುಲಕರ್ಣಿ, ಸಮಾಜ ಸೇವಾಕರ್ತ ಚನ್ನಬಸಪ್ಪ ಧಾರವಾಡಶೆಟ್ರು, ಕುಂದಗೋಳದ ಜಿ.ಡಿ.ಘೋರ್ಪಡೆ, ರವೀಂದ್ರ ದಂಡಿನ ಅವರಿಗೆ ಸುವರ್ಣ ಸಮ್ಮಾನ ಗೌರವ ಪ್ರಶಸ್ತಿ ಹಾಗೂ ವೈಷ್ಣವದೇವಿ ಮಂದಿರದ ದೇವಪ್ಪಜ್ಜ ಅವರಿಗೆ ‘ಕನ್ನಡದ ಕಟ್ಟಾಳು’ ಪ್ರಶಸ್ತಿ ನೀಡಿ ಗೌರವಿಸಿತು. ಡಾ.ವಂದನಾ ರಮೇಶ, ಅಪರ್ಣಾ ಕುಲಕರ್ಣಿ ಸಂಗಡಿಗರು ನಾಡಗೀತೆ ಹಾಡಿದರು.
ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಸಂದೀಪ ಬೂದಿಹಾಳ ಸ್ವಾಗತಿಸಿದರು. ಕಚುಸಾಪ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.
ಬಿಜೆಪಿ ಕಚೇರಿ:
ಹುಬ್ಬಳ್ಳಿ– ಧಾರವಾಡ ಮಹಾನಗರ ಜಿಲ್ಲಾ ಭಾರತೀಯ ಜನತಾ ಪಾರ್ಟಿ ದೇಶಪಾಂಡೆ ನಗರದ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಅಂಗವಾಗಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ವಿಜೃಂಭಣೆಯಿಂದ ಆಚರಿಸಲಾಯಿತು.
ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಲಿಂಗರಾಜ ಪಾಟೀಲ, ರಾಜಕುಮಾರ್ ಬಸವ ಪ್ರದೀಪ ಮುಳ್ಳೂರ, ಜಿಲ್ಲಾ ವಕ್ತಾರ ರವಿ ನಾಯಕ, ಮೋಹನ್ ರಾಮದುರ್ಗ, ಮುರುಗೇಶ್ ಹೊರಡಿ, ವೀರಣ್ಣ ಕಾಶಪ್ಪನವರ ಉಪಸ್ಥಿತರಿದ್ದರು.
ಕಾಡಸಿದ್ಧೇಶ್ವರ ಕಾಲೇಜು:
ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯ ಕಾಲೇಜು ಒಕ್ಕೂಟ ಮತ್ತು ಕನ್ನಡ ವಿಭಾಗವು ಸುವರ್ಣ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು.
ಪ್ರಾಚಾರ್ಯೆ ಉಮಾ ವಿ. ನೇರ್ಲೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಆರಂಭಕ್ಕೂ ಮೊದಲು ಭುವನೇಶ್ವರಿಯ ಭಾವಚಿತ್ರಕ್ಕೆ ಪ್ರಾಚಾರ್ಯರು ಮತ್ತಿತರ ಹಿರಿಯ ಬೋಧಕ ಸಿಬ್ಬಂದಿ ಪೂಜೆ ನೆರವೇರಿಸಿದರು. ಕನ್ನಡದ ಹಿರಿಯ ಉಪನ್ಯಾಸಕ ಡಾ.ಆರ್.ಐ. ಹರಕುಣಿ , ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಮತ್ತು ಕಾಲೇಜು ಒಕ್ಕೂಟದ ಅಧ್ಯಕ್ಷೆ ಡಾ.ವಿಜಯಶ್ರೀ ಹಿರೇಮಠ, ಐ.ಕ್ಯು.ಎ.ಸಿ. ಸಂಯೋಜಕ ಡಾ.ಎಂ.ಬಿ. ಸಿದ್ದೇಶ ಪಾಲ್ಗೊಂಡಿದ್ದರು.
ಸಿಟಿ ರೇಶ್ಮಿ ಶಾಲೆ–ಕಾಲೇಜು:
ನಗರದ ಕೇಶ್ವಾಪೂರದಲ್ಲಿರುವ ರೇಶ್ಮಿ ಕಲ್ಯಾಣ ಮತ್ತು ಶೈಕ್ಷಣಿಕ ಸಂಸ್ಥೆಯ ಸಿಟಿ ರೇಶ್ಮಿ ಕನ್ನಡ
ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ರೇಶ್ಮಿ ಅಲ್ ಮಿಲಾದ ಉರ್ದು ಪ್ರೌಡ ಶಾಲೆ, ಸಿಟಿ
ರೇಶ್ಮಿ ಕಲಾ ಮತ್ತು ವಾಣಿಜ್ಯ ಪಿ.ಯು. ಕಾಲೇಜಿನಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶಮಶುದ್ದೀನ ಎಫ್ ರೇಶ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಗಫಾರ ಜಮಾದಾರ, ಸಂಸ್ಥೆಯ ಕಾರ್ಯದರ್ಶಿ ಮಕಬೂಲ್ಅಹ್ಮದ ರೇಶ್ಮಿ ಉಪಸ್ಥಿತರಿದ್ದರು.
ಭಾವದೀಪ ಶಿಕ್ಷಣ ಸಂಸ್ಥೆ:
ಹುಬ್ಬಳ್ಳಿಯ ಭವಾನಿ ನಗರದಲ್ಲಿರುವ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸುನೀತಾ ಹುಬಳಿಕರ್ ಆಗಮಿಸಿದ್ದರು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎನ್.ವೆಂಕಟೇಶಾಚಾರ್ಯ, ಕಾರ್ಯದರ್ಶಿ ಕನಕವೀಡು, ಸೇತುಮಾಧವರಾವ್ , ಖಜಾಂಚಿ ಕನಕಗಿರಿ ರಘೋತ್ತಮರಾವ್, ಸದಸ್ಯ ಶ್ರೀರಂಗ ಹನುಮಸಾಗರ, ಪ್ರಾಚಾರ್ಯೆ ಶ್ರೀದೇವಿ ಮಳಗಿ ಮತ್ತು ಮುಖ್ಯೋಪಾಧ್ಯಾಯರಾದ ಅನಿತಾ ಬಾಗಲಕೋಟ ಉಪಸ್ಥಿತರಿದ್ದರು.
ಚಿನ್ಮಯ ಕಾಲೇಜು:
ಇಲ್ಲಿನ ಚಿನ್ಮಯ ಪಿಯು ಕಾಲೇಜಿನಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆ: ಬಸವರಾಜ ಪತ್ತಾರ (ಪ್ರಥಮ), ಶ್ರೀಧರ ಕುಲಕರ್ಣಿ (ದ್ವಿತೀಯ), ಎಚ್.ಎಂ.ಚಿನ್ಮಯಿಶಾಸ್ತ್ರಿ (ತೃತೀಯ), ರಮ್ಯಾ ಕುಲಕರ್ಣಿ-ಸಮಾಧಾನಕರ ಬಹುಮಾನ. ನಾಡಭಕ್ತಿ ಗೀತೆ ಸ್ಪರ್ಧೆ: ರಕ್ಷಿತಾ ಎಸ್ (ಪ್ರಥಮ), ವಿಭಾ ಎಸ್.ಉಮಚಗಿ (ದ್ವಿತೀಯ), ವರ್ಷಿಣಿ ಹೊಸಳ್ಳಿ (ತೃತೀಯ), ಚಿತ್ರಕಲಾ ಸ್ಪರ್ಧೆ: ಮಹೇಶ ಗಣಾಚಾರಿ (ಪ್ರಥಮ), ದಿಯಾ ದಲಬಂಜನ (ದ್ವಿತೀಯ), ನಮ್ರತಾ ದಲಬಂಜನ (ತೃತೀಯ) ಜಾನವಿ ಹೂಗಾರ- ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಜಾನಪದ ಕಲಾವಿದ ಎಸ್.ಎಸ್. ಹಿರೇಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ವಿನಾಯಕ ಬಿ.ಕೆ ಹಿರಿಯ ಉಪನ್ಯಾಸಕ ವಾಮನ ನಾಡಿಗೇರ, ಅನ್ವರ ಮುಲ್ಲಾ. ಷಣ್ಮುಖ ಮಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು.
ಆದರ್ಶ ಪಪೂ ಕಾಲೇಜು:
ಸಂಸ್ಥೆಯ ಅಧ್ಯಕ್ಷ ಲಿಂಗರಾಜ ಪಾಟೀಲ ಅವರು ಧ್ವಜಾರೋಹಣ ನೇರವೇರಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ರಮೇಶ ಮುಳಿಕ್ ಹಾಗೂ ನೀಲಮ್ಮ ಕರ್ನಾಟಕ ರಾಜ್ಯೋತ್ಸವದ ಸುದೀರ್ಘ ಇತಿಹಾಸದ ಬಗ್ಗೆ ಮಾತನಾಡಿದರು.
ಮಹಾವಿದ್ಯಾಲಯದ ನಿರ್ದೇಶಕರಾದ ಪ್ರೊ.ಎಸ್.ಬಿ. ಕುನ್ನುರ, ಪ್ರೊ.ಬಿ.ಸಿ. ಗೌಡರ, ಪ್ರೊ.ಡ್ಯಾನಿಯಲ್ ಹೊಸಕೇರಿ, ಪ್ರಾಚಾರ್ಯ ಎಂ.ಕೆ. ಬೆಳಗಲಿ, ಕೃಷ್ಣಾ ಜೋಶಿ ಉಪಸ್ಥಿತರಿದ್ದರು.
ಸಂಸ್ಕಾರ ಶಾಲೆ:
ಶಾಲೆಯಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪತ್ರಕರ್ತ ಬಂಡು ಕುಲಕರ್ಣಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಪ್ರಾಂಶುಪಾಲ ನೈನಾ ಪಿ.ಸಿ ಹಾಗೂ ಮುಖ್ಯ ಆಡಳಿತಾಧಿಕಾರಿ ವಿನೋದ್ ಎಸ್ ಉಪಸ್ಥಿತರಿದ್ದರು. ನಂತರ ಅತಿಥಿಗಳು ಹಾಗೂ ವೇದಿಕೆಯ ಮೇಲಿದ್ದ ಗಣ್ಯರು ಜ್ಯೋತಿ ಬೆಳಗಿಸಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.