ಹುಬ್ಬಳ್ಳಿ: ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಬಂದ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ನಗರದ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದವರೆಗೆ ವಾದ್ಯಮೇಳಗಳಿಂದ ಅಭಿಮಾನಿಗಳು ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಆರ್.ಎಸ್.ಎಸ್. ಕಚೇರಿಯಾದ ಕೇಶವಕುಂಜ, ಸಿದ್ಧಾರೂಢ ಮಠ, ಮೂರುಸಾವಿರ ಮಠಕ್ಕೆ ಭೇಟಿ ನೀಡಿದರು.
ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಯಾವುದೇ ಖಾತೆ ನೀಡಿದರೂ, ಹಿರಿಯರ ಮಾರ್ಗದರ್ಶನದಲ್ಲಿ ನಿಭಾಯಿಸಿಕೊಂಡು ಹೋಗುತ್ತೇನೆ ಎಂದರು.
ಕಳಸಾ ಬಂಡೂರಿ ಯೋಜನೆ ಹೋರಾಟದ ಮೂಲಕವೇ ನಾನು ಮೇಲೆ ಬಂದವನು. ಆ ಯೋಜನೆ ಅನುಷ್ಠಾನಕ್ಕೆ ಆಂತರಿಕವಾಗಿ ಕೆಲವು ಸಮಸ್ಯೆಗಳಿದ್ದು, ಅನಗತ್ಯ ಗೊಂದಲ ಸೃಷ್ಟಿಯಾಗಬಾರದು. ಕಾನೂನಿನ ಮೂಲಕ ಅದಕ್ಕೊಂದು ತಾರ್ಕಿಕ ಅಂತ್ಯ ಹಾಕಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಜಿಲ್ಲೆಯ ತುಪ್ರಿಹಳ್ಳ ಮತ್ತು ಬೆಣ್ಣೆ ಹಳ್ಳದಿಂದ ಉಂಟಾಗುವ ನೆರೆ ಸಮಸ್ಯೆ ಪರಿಹಾರಕ್ಕೆ ಡ್ರೋಣ್ ಸಮೀಕ್ಷೆ ನಡೆಸಲಾಗಿದೆ. ಸಚಿವ ಸಂಪುಟದ ಆದೇಶಕ್ಕೆ ಕಾಯುತ್ತಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಆ ಭಾಗದ ಜನತೆಗೆ ಸಿಹಿ ಸುದ್ದಿ ನೀಡುತ್ತೇನೆ ಎಂದರು.