ನವಲಗುಂದ: ‘ಸಮಾಜದ ಏಳಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡಿದ ಬೀದಿ ಬದಿ ವ್ಯಾಪಾರಿಗಳು ಸ್ವಚ್ಛತೆಗೆ ಅದ್ಯತೆ ನೀಡಬೇಕು. ನಿಮಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ರಚಿತವಾದ ಕಾನೂನಿನ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಬೀದಿ ಬದಿ ವ್ಯಾಪಾರಿಗಳ ಜೊತೆಗೆ ಸಮಾಜದ ಎಲ್ಲ ವರ್ಗದವರಿಗೆ ಉಚಿತ ಕಾನೂನು ಅರಿವು-ನೆರವು ನೀಡುತ್ತದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ವಕೀಲ ಶ್ಯಾಮಸುಂದರ ಡಂಬಳ ಹೇಳಿದರು.
ಅವರು ಬುಧವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಕಾನೂನು ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಗ್ರಾಹಕರ ಕಾಯ್ದೆ ಸೇರಿದಂತೆ ಕಾನೂನಿನ ಮಾಹಿತಿ ನೀಡಿ, ಮಳೆ, ಚಳಿ, ಬಿಸಿಲು ಲೆಕ್ಕಸದೇ ಸದಾ ತಮ್ಮ ವ್ಯಾಪಾರದಲ್ಲಿ ತೊಡಗುವ ವ್ಯಾಪಾರಿಗಳು ಗೌರವದ ಬದುಕು ಕಟ್ಟಿಕೊಡಲು ಜಾರಿ ಮಾಡಲಾದ ಜೀವನ ರಕ್ಷಣೆ ಹಾಗೂ ರಸ್ತೆ ನಿಯಂತ್ರಣ ಕಾಯ್ದೆ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ರಿಯಾಜ್ ಅಹಮ್ಮದ್ ಮಾತನಾಡಿ, ‘ಸರ್ಕಾರದ ಯೋಜನೆ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ಕಾನೂನು ಪಾಲನೆ ಮಾಡಬೇಕು. ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಸುಚಿತ್ವ ಕಾಪಾಡಬೇಕು’ ಎಂದರು.
ಪುರಸಭೆಯ ಸಮುದಾಯ ಸಂಘಟಣಾಧಿಕಾರಿ ಜೆ.ಎಸ್.ಕಣವಿ ಮಾತನಾಡಿ, ಪ್ರಧಾನಮಂತ್ರಿ ಜನ ಧನ, ಜೀವನ ಜ್ಯೋತಿ, ಪಿಎಂ ಸುರಕ್ಷಾ ಭೀಮಾ, ಶ್ರಮ ಯೋಗಿ ಮಂಥನ, ಜನನಿ ಸುರಕ್ಷಾ, ಮಾತೃ ವಂದನಾ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದರು.
ಪುರಸಭೆ ಅಧಿಕಾರಿಗಳಾದ ಶೋಭಾ ಹೆಬ್ಬಳ್ಳಿ, ಸುರೇಖಾ ಪಾಟೀಲ್, ಸಿಬ್ಬಂದಿ ಚೇತನಾ ಪೂಜಾರ್, ಭಾಗ್ಯಶ್ರೀ ಭಜಂತ್ರಿ, ವ್ಯಾಪಾರಸ್ಥರಾದ ದಾವಲಬಿ ಅಲ್ಲಿಬಾಯಿ, ಮರೆವ್ವ ನಡುವಿನಮನಿ, ರಶ್ಮಿ ಸಂಬಣ್ಣವರ, ಜಮಾಲ್ ಜಿಗಳೂರ್, ಮಮ್ಮದಲಿ ಮಿರ್ಜಿ, ಮಹಮ್ಮದಲಿ ಬಾಗವಾನ್, ಬಸವರಾಜ್ ಹೆಬಸೂರ್, ರಾಮಣ್ಣ ಕಾಳಿ, ಮುಬಾರಕ್ ಜಮಖಾನ, ಸದ್ದಾಂ ಹುಸೇನ್ ಸೋಟಕನಾಳ ಇದ್ದರು.
ರವಿ ವಿಶ್ವಜ್ಞ ಸ್ವಾಗತಿಸಿದರು. ಜೆ.ಸಿ.ಹೂಗಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.