ಹುಬ್ಬಳ್ಳಿ: ‘ಮನುಷ್ಯ ಆಘಾತಕಾರಿ ಘಟನೆಗಳಿಂದ ಮನ ನೊಂದಾಗ, ಜನಪದ ಹಾಡುಗಳನ್ನು ಕೇಳಬೇಕು. ಆಗ ಆತನ ಮನಸ್ಸು ತಣಿದು ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ಕಲಾವಿದ ಮಾರುತಿ ಹುಟಗಿ ಅಭಿಪ್ರಾಯಪಟ್ಟರು.
ನಗರದ ಡಾಲರ್ಸ್ ಕಾಲೊನಿಯಲ್ಲಿ ಜನಪದರು ಕರ್ನಾಟಕ ಜಾನಪದ ಟ್ರಸ್ಟ್ ಹಾಗೂ ಪೃಕಾಶ ನೃತ್ಯ ಕಲಾಮಂದಿರ ಸಹಯೋಗದಲ್ಲಿ ತಕ್ಷಶಿಲಾ ಅಕಾಡೆಮಿಯಲ್ಲಿ ನಡೆದ 11ನೇ ದಿನದ ‘ಮನೆ ಮನೆಯಲ್ಲಿ ಶ್ರಾವಣ ಜಾನಪದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿ ಜನಪದ ಸಾಹಿತ್ಯಕ್ಕಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಕರ್ಮಿ ರಾಘವೇಂದ್ರ ರಾಮದುರ್ಗ ವಹಿಸಿದ್ದರು. ಭೀಮಪ್ಪ ಗಾಳಪ್ಪನವರ , ಶಿವರುದ್ರಪ್ಪ ಬಡಿಗೇರ, ನರಸಿಂಹ ಅರೆಪಲಿ, ಡ್ಯಾನಿಯಲ್ ದೇವನೂರ, ಮೋಹನ ಅಗಳತಕಟ್ಟಿ, ಸಂಗೀತಾ ಬದ್ಧಿ, ಅಕ್ಕಮಹಾದೇವಿ ಬಾಗೆವಾಡಿ, ರೂಪಾ ಮಾದಪ್ಪನವರ, ಶ್ರೀದೇವಿ ಬಡಿಗೇರ ಹಾಗೂ ಮಂಗಲಾ ಹುಟಗಿ ಇದ್ದರು.
ಇದೇ ಸಂದರ್ಭದಲ್ಲಿ ಡಾ. ರಾಮೂ ಮೂಲಗಿ ಅವರು ಶ್ರಾವಣ ಮಾಸದ ಹಬ್ಬಗಳು, ನೀರು, ನೈರ್ಮಲ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಗೀತೆಗಳನ್ನು ಹಾಡಿದರು. ಜತೆಗೆ, ಮಳೆಯಿಂದ ಹಾನಿಗೊಳಗಾದ ಶಿವಪುತ್ರನಗರದ ಪ್ರದೇಶದ ಸಂತ್ರಸ್ತರಿಗೆ ಸೀರೆ, ಹೊದಿಕೆ ಹಾಗೂ ಆಹಾರದ ಪೊಟ್ಟಣಗಳನ್ನು ವಿತರಿಸಲಾಯಿತು.