ಹುಬ್ಬಳ್ಳಿ: ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹಿಸಿ, ಇಲ್ಲಿನ ವಿದ್ಯಾವನ ಕಾಲೊನಿ ನಿವಾಸಿಗಳು ಭಾನುವಾರ ರಸ್ತೆ ಗುಂಡಿಗಳ ಸುತ್ತ ರಂಗೋಲಿ ಬಿಡಿಸಿ, ಸಚಿವ ಜಗದೀಶ ಶೆಟ್ಟರ್ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಮಹೇಶ ಬುರ್ಲಿ ಅವರ ಭಾವಚಿತ್ರಗಳನ್ನಿಟ್ಟು ವಿಭಿನ್ನವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ವಿದ್ಯಾವನ ನಿವಾಸಿ ಹಿತವರ್ಧಕ ಸಂಘದ ಅಧ್ಯಕ್ಷ ಸಂತೋಷ ಪವಾರ, ‘ಕಾಲೊನಿ ರಸ್ತೆ ಹದಗೆಟ್ಟು ಮೂರು ವರ್ಷವಾಯಿತು. ಅಂದಿನಿಂದಲೂ ದುರಸ್ತಿಗೆ ಒತ್ತಾಯಿಸಿ ಸ್ಥಳೀಯ ಪಾಲಿಕೆ ಸದಸ್ಯ ಮಹೇಶ ಬುರ್ಲಿ ಹಾಗೂ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಕೊಟ್ಟಿದ್ದೇವೆ. ಆದರೆ, ಇದುವರೆಗೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ’ ಎಂದರು.
‘ನಮ್ಮ ಅಕ್ಕಪಕ್ಕದ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ, ವಿದ್ಯಾವನ ಕಾಲೊನಿ ರಸ್ತೆಯನ್ನು ಮಾತ್ರ ಕಡೆಗಣಿಸಿದ್ದಾರೆ. ಶೆಟ್ಟರ್ ಅವರ ಮನೆಗೆ ಹೋಗಿ, ಸಮಸ್ಯೆಯನ್ನು ಹೇಳಿಕೊಂಡಿದ್ದೆವು. ಶೀಘ್ರ ದುರಸ್ತಿ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ರಸ್ತೆ ಚಹರೆ ಮಾತ್ರ ಇದುವರೆಗೆ ಬದಲಾಗಿಲ್ಲ. ಹಾಗಾಗಿ, ಗುಂಡಿಗಳಿಗೆ ಶೆಟ್ಟರ್ ಹಾಗೂ ಬಿಜೆಪಿ ಮುಖಂಡ ಮಹೇಶ ಬುರ್ಲಿ ಅವರ ಭಾವಚಿತ್ರವಿಟ್ಟು ಪ್ರತಿಭಟಿಸಿದ್ದೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇನ್ನಾದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಕಾಲೊನಿಯ ನಿವಾಸಿಗಳೆಲ್ಲರೂ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.