ಹುಬ್ಬಳ್ಳಿ: ಶಾಲೆಗಳು ಪ್ರಾರಂಭವಾಗದ ಕಾರಣ ವಿದ್ಯಾರ್ಥಿಗಳು ಮನೆಯಿಂದಲೇ ಅಭ್ಯಾಸದಲ್ಲಿ ತೊಡಗಲು ಪ್ರೇರೇಪಿಸುವ ಸಲುವಾಗಿ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ಶಾಲೆಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಸಾಮಗ್ರಿಗಳನ್ನು ವಿತರಿಸಿತು.
ಅನೇಕ ದಾನಿಗಳಿಂದ ನೆರವಿನ ನಿಧಿ ಸಂಗ್ರಹಿಸಲಾಗಿದ್ದು, ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ವ್ಯಾಪ್ತಿಯ ಆಯ್ದ 20 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಬುಧವಾರ ಶೈಕ್ಷಣಿಕ ಪರಿಕರಗಳನ್ನು ನೀಡಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನ ಹಾಗೂ ಗಣಿತಕ್ಕೆ ಸಂಬಂಧಿಸಿದ ಸುಮಾರು 40 ಪರಿಕರಗಳನ್ನು ನೀಡಲಾಯಿತು. ಇದರಿಂದ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳಿಗೆ ಪ್ರಯೋಗಗಳ ಮೂಲಕ ಪಠ್ಯ ಬೋಧನೆ ಮಾಡಲು ಅನುಕೂಲವಾಗಲಿದೆ.
ಪರಿಕರಗಳನ್ನು ವಿತರಿಸಿದ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್ ಕರಿಕಟ್ಟಿ ಮಾತನಾಡಿ ‘ಅಗಸ್ತ್ಯ ಪ್ರತಿಷ್ಠಾನ ಅನೇಕ ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಮ್ಮ ವಿಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ನೆರವಾಗಿದೆ. ಲಾಕ್ಡೌನ್ ಅವಧಿಯಲ್ಲೂ ಉತ್ತಮ ಕೆಲಸ ಮಾಡಿದೆ’ ಎಂದು ಶ್ಲಾಘಿಸಿದರು.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಮಾರ ಸಿಂಧಗಿ, ಶಿಕ್ಷಣ ಸಂಯೋಜಕರಾದ ಪ್ರಭಾಕರ ಜಿ, ಆರ್.ಬಿ.ಪಾಟೀಲ, ಪ್ರತಿಷ್ಠಾನದ ಮಾರ್ಗದರ್ಶಿ ಶಿಕ್ಷಕರಾದ ಅಶೋಕ ಗುಜಮಾಗಡಿ, ರಮೇಶ ಅಣ್ಣಿಗೇರಿ, ಸುನಿಲ ಮತ್ತಿಗಟ್ಟಿ ಪಾಲ್ಗೊಂಡಿದ್ದರು.