ಹುಬ್ಬಳ್ಳಿ: ‘ತೆರೆಮರೆಯಲ್ಲಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಸುಮಧುರ ಫೌಂಡೇಷನ್ ಮುಂದಾಗಿರುವುದು ಸಂತಸದ ಸಂಗತಿ’ ಎಂದು ಶ್ರೀ ದತ್ತ ಫೌಂಡೇಷನ್ ಅಧ್ಯಕ್ಷ ಪ್ರಕಾಶ ಜೋಶಿ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಸುಮಧುರ ಫೌಂಡೇಷನ್ ಹಾಗೂ ಡಾ. ಎಸ್ಪಿಬಿ ಸಂಗೀತ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಉದಯೋನ್ಮುಖ ಕಲಾವಿದರು ಕಲಾ ಸೇವೆಗಾಗಿ ನಮ್ಮಲ್ಲಿಗೆ ಬಂದು ಕೇಳುತ್ತಾರೆ. ಆದರೆ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಆ ಕೆಲಸವನ್ನು ಫೌಂಡೇಷನ್ ಕೈಗೆತ್ತಿಕೊಂಡಿದೆ’ ಎಂದರು.
ಎಸಿಪಿ ವಿನೋದ ಮುಕ್ತೇದಾರ್ ಮಾತನಾಡಿ, ‘ಹಿಂದೆ ಗಣೇಶ ಹಬ್ಬ, ಕನ್ನಡ ರಾಜ್ಯೋತ್ಸವಗಳಲ್ಲಷ್ಟೇ ಸಂಗೀತ ಕಾರ್ಯಕ್ರಮಗಳನ್ನು ನೋಡುತ್ತಿದ್ದೆವು. ಈಗ ಎಲ್ಲಾ ಕಡೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಲಾ ರಸಿಕರಿಗೆ ರಸದೌತಣ ಬಡಿಸುತ್ತಿವೆ’ ಎಂದು ಅಭಿಪ್ರಾಯಪಟ್ಟರು.
ನಗರದ ಹವ್ಯಾಸಿ ಗಾಯಕರು ಎಸ್ಪಿಬಿ ಹಾಡಿದ 25 ಯುಗಳಗೀತೆಗಳನ್ನು ಹಾಡಿದರು. ಫೌಂಡೇಷನ್ ಅಧ್ಯಕ್ಷೆ ಪ್ರೇಮಾ ಹೂಗಾರ, ಉಪಾಧ್ಯಕ್ಷ ಗುರುರಾಜ ಹೂಗಾರ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಐಶ್ವರ್ಯ ಹೂಗಾರ, ಶುಭಾಂಕ ಹೂಗಾರ,ನರೇಂದ್ರ ಕುಲಕರ್ಣಿಹಾಗೂ ಸುನೀಲ ಪತ್ರಿ ಇದ್ದರು.