ಹುಬ್ಬಳ್ಳಿ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ಗೋಪನಕೊಪ್ಪದ ಸುಮಿತಾ ಜಮಾದಾರ ಅವರಿಗೆ ನಂಬಿಸಿದ ಮೂವರು, ₹21 ಲಕ್ಷ ವಂಚನೆ ಮಾಡಿದ್ದಾರೆ.
ಪತಿಯ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದ ಸುಮಿತಾ ಅವರಿಗೆ ಪರಿಚಯಯವಿದ್ದ ಅಕ್ಕಮ್ಮ ರೆಡ್ಡಿ ಮೂಲಕ ಬೆಳಗಾವಿಯ ಶಿವಪುತ್ರಯ್ಯ ಹಿರೇಮಠ ಪರಿಚಯವಾಗಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಬರುತ್ತದೆ ಎಂದು ನಂಬಿಸಿ, ₹3ಲಕ್ಷ ಚೆಕ್ ಮೂಲಕ ಪಡೆದಿದ್ದನು. ನಂತರ ಅಕ್ಕಮ್ಮ ರೆಡ್ಡಿ ಜೊತೆ ಜಾಹೀದಾ ಬೇಗಂ ಎಂಬುವಳು ಸೇರಿಕೊಂಡು ಮತ್ತೆ ಹಣ ಹೂಡಿಕೆ ಮಾಡಲು ₹18 ಲಕ್ಷವನ್ನು ಫೋನ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಷೇರು ಮಾರುಕಟ್ಟೆಗೆ ಹಣವೂ ಹಾಕದೆ, ಮರಳಿಯೂ ನೀಡದೆ ವಂಚಿಸಿದ್ದಾರೆ ಎಂದು ವೃದ್ಧೆ ಸುಮಿತಾ ಮೂವರ ವಿರುದ್ಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆನ್ಲೈನ್ನಲ್ಲಿ ವಂಚನೆ: ಪೇಪರ್ ಪ್ಲೇಟ್ ತಯಾರಿಸುವ ಯಂತ್ರ ಖರೀದಿಸಲು ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಿದ ಗೋಪನಕೊಪ್ಪದ ಎನೋಷ್ ಜಮಖಂಡಿ ₹30 ಸಾವಿರ ವಂಚನೆಗೊಳಗಾಗಿದ್ದಾರೆ.
ಎನೋಷ್ ಅವರು ಆನ್ಲೈನ್ ಮಾರ್ಕೆಟ್ಲ್ಲಿ ಪೇಪರ್ ಪ್ಲೇಟ್ ತಯಾರಿಸುವ ಯಂತ್ರ ಖರೀದಿಸಲೆಂದು ಗೂಗಲ್ನಲ್ಲಿ ಹುಡುಕುತ್ತಿದ್ದಾಗ, ನರೇಶ ಎಂದು ಪರಿಚಯಿಸಿಕೊಂಡ ವ್ಯಕ್ತಿ ಒಂದು ಯಂತ್ರಕ್ಕೆ ₹35 ಸಾವಿರ ಎಂದು, ಮುಂಗಡವಾಗಿ ₹30 ಸಾವಿರ ವರ್ಗಾಯಿಸಿಕೊಂಡಿದ್ದ. ನಂತರ ಜಿಎಸ್ಟಿ ನಂಬರ್ ಕಳುಹಿಸಿದ್ದ. ಅದನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಿಲ್ಟ್ರಿ ಕ್ಯಾಂಟೀನ್ ಹೆಸರಲ್ಲಿ ವಂಚನೆ: ಮಿಲ್ಟ್ರಿ ಕ್ಯಾಂಟೀನ್ಗೆ ಸೈಕಲ್ ಬೇಕಾಗಿದೆ ಎಂದು ಕೊಪ್ಪಿಕರ್ ರಸ್ತೆಯ ದೀಪಕ್ ಸೈಕಲ್ ಅಂಗಡಿಯ ವ್ಯವಸ್ಥಾಪಕ ಸುನೀಲ್ ವಕ್ಕುಂದ ಅವರಿಗೆ ಕರೆ ಮಾಡಿದ ವ್ಯಕ್ತಿ, ಅವರಿಂದ ₹70ಸಾವಿರ ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಕೇಶ್ವಾಪುರದ ಅರಿಹಂತ ನಗರದಲ್ಲಿರುವ ಮಿಲ್ಟ್ರಿ ಕ್ಯಾಂಟೀನ್ನಿಂದ ಮಾತನಾಡುತ್ತಿರುವುದಾಗಿ ಕರೆ ಮಾಡಿದ ವಂಚಕ, 20 ಸೈಕಲ್ಗಳ ಬೇಡಿಕೆ ಇಟ್ಟಿದ್ದ. ಅದಕ್ಕೆ ಸುನೀಲ್ ₹1.36 ಲಕ್ಷದ ಬಿಲ್ ಅನ್ನು ವಂಚಕನ ವಾಟ್ಸ್ಆ್ಯಪ್ಗೆ ಕಳುಹಿಸಿದ್ದರು. ನಂತರ ಸೈಕಲ್ಗಳನ್ನು ಕ್ಯಾಂಟೀನ್ ಬಳಿ ಸಾಗಿಸಿದಾಗ, ಕ್ಯಾಂಟೀನ್ ನಿಯಮದ ಪ್ರಕಾರ ನಾವು ಕಳುಹಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಅದಕ್ಕೆ ₹1 ಸಂದಾಯ ಮಾಡಿದರೆ, ದುಪ್ಪಟ್ಟು ಬರುತ್ತದೆ. ಆ ಮೂಲಕವೇ ಸೈಕಲ್ ಹಣ ಪಾವತಿಸುವುದಾಗಿ ಹೇಳಿದ್ದಾನೆ. ಅದನ್ನು ನಂಬಿದ ವ್ಯವಸ್ಥಾಪಕರು ಹಂತ ಹಂತವಾಗಿ ಹಣ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ. ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಚೆ ಕಚೇರಿಯಲ್ಲಿ ಕಳವು: ಇಲ್ಲಿನ ವಿದ್ಯಾನಗರದ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಅಂಚೆ ಕಚೇರಿಯ ಬಾಗಿಲು ಮುರಿದು ₹16ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ.
ಐದು ಮೊಬೈಲ್ಗಳು, ₹930 ನಗದು ಹಾಗೂ ಇತರ ಸಾಮಗ್ರಿ ಕಳವು ಆಗಿದೆ ಎಂದು ಪೋಸ್ಟ್ ಮಾಸ್ಟರ್ ರಮಾ ರವಿಚಂದ್ರ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.