ಹುಬ್ಬಳ್ಳಿ: ತಾಲ್ಲೂಕಿನ ಬುಡರಶಿಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಬರಹ ಬರೆದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ, ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶನಿವಾರ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮಂಜುಳಾ ಬಿ.ಎಸ್. ಅವರಿಗೆ ಮನವಿ ಸಲ್ಲಿಸಿದರು.
ಘಟನೆ ನಡೆದ ವಾರವಾದರೂ ಪೊಲೀಸರು ಇದುವರೆಗೆ ದುಷ್ಕರ್ಮಿಗಳನ್ನು ಬಂಧಿಸಿಲ್ಲ. ಕೋಮು ಸೌಹಾರ್ದ ಕಲಕುವಂತಹ ಈ ಘಟನೆಯಿಂದಾಗಿ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ. ಹಾಗಾಗಿ, ತನಿಖೆಯನ್ನು ಚುರುಕುಗೊಳಿಸಿ ಆದಷ್ಟು ಬೇಗ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಮಂಜುಳಾ ಬಿ.ಎಸ್, ‘ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇವೆ. ಶಾಲೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದು, ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಭರವಸೆ ನೀಡಿದರು.
ಗ್ರಾಮದ ಸುರೇಶ ಫಕ್ಕೀರಪ್ಪ ಒಣರೊಟ್ಟಿ, ಶೇಖಪ್ಪ ಜಗಳೂರ, ಯಲ್ಲಪ್ಪ ಒಣರೊಟ್ಟಿ, ವೀರಭದ್ರಪ್ಪ ತರ್ಲಘಟ್ಟ, ಫಕ್ಕೀರಪ್ಪ ನವಲಗುಂದ, ನಿಂಗಪ್ಪ ಕಟಗಿ, ಮಂಜುನಾಥ ಕಟಗಿ, ಅಶೋಕ ಜಿಗಳೂರ, ಉಮೇಶ ಪಂಪಯ್ಯನಮಠ ಇದ್ದರು.