ಜಿಲ್ಲೆಯನ್ನು ಸೀಮೆ ಎಣ್ಣೆ ಮುಕ್ತ ಮಾಡಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ನಾಲ್ಕೈದು ತಿಂಗಳಿನಿಂದ ಸೀಮೆ ಎಣ್ಣೆ ಸರಬರಾಜು ನಿಲ್ಲಿಸಲಾಗಿದೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲ ಮನೆಗಳು ಕುಸಿದಿದ್ದರಿಂದಲೂ ವಿದ್ಯುತ್ ಸಂಪರ್ಕವಿರಲಿಲ್ಲ. ಇದೇ ವೇಳೆ ಸೀಮೆ ಎಣ್ಣೆಯೂ ಸಿಗದ ಕಾರಣ ಜನ ಸಾಕಷ್ಟು ಹೊತ್ತು ಕತ್ತಲಲ್ಲೇ ಕಳೆದರು. ಮೊದಲಾದರೆ ಸೀಮೆ ಎಣ್ಣೆಯಿಂದ ದೀಪ ಹಚ್ಚುತ್ತಿದ್ದರು. ಈಗ ದೀಪ ಹಚ್ಚಲು ದುಬಾರಿ ಬೆಲೆ ತೆತ್ತು ಅಡುಗೆ ಎಣ್ಣೆ ಖರೀದಿಸಿ ಬೆಳಕು ಪಡೆಯಬೇಕಾದ ಸ್ಥಿತಿ ಎದುರಾಗಿದೆ.