ಹುಬ್ಬಳ್ಳಿ: ಶಾಲಾ ವಾಹನ ಸುರಕ್ಷತೆ ನಿಯಮ ಹುಬ್ಬಳ್ಳಿಯಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಅತಿ ವೇಗ– ಅಜಾಗರೂಕ ಚಾಲನೆಯೂ ಸಾಮಾನ್ಯ ಎಂಬಂತಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ಮಿತಿ ಮೀರಿದ ಸಂಖ್ಯೆಯಲ್ಲಿ ಮಕ್ಕಳನ್ನು ತುಂಬುವುದು, ಕೈಚೀಲಗಳನ್ನು ಹೊರಗೆ ನೇತು ಹಾಕುವುದು, ಚಾಲಕರ ಸೀಟಿನಲ್ಲಿಯೂ ಮಕ್ಕಳನ್ನು ಕೂರಿಸಿಕೊಳ್ಳುವುದು ನಡೆದೇ ಇದೆ. ಪೊಲೀಸರು ಅಪರೂಪಕ್ಕೊಮ್ಮೆ ಅಭಿಯಾನ ನಡೆಸಿ ಸುಮ್ಮನಾಗುವುದರಿಂದ, ನಿಯಮ ಪಾಲನೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ.
ಶಾಲಾ ವಾಹನಗಳ ಅಪಘಾತದ ಬಗ್ಗೆ ಕಳವಳ ವ್ಯಕ್ತಡಿಸಿದ್ದ ಸುಪ್ರೀಂ ಕೋರ್ಟ್ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಖುದ್ದು ಕೆಲವು ನಿರ್ದೇಶಗಳನ್ನು ನೀಡಿತ್ತು. ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚನೆ ನೀಡಿತ್ತು. ಸುರಕ್ಷತೆ ಮಾನದಂಡಗಳನ್ನು ಶಾಲಾ ವಾಹನ ಚಾಲಕರು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಶಿಕ್ಷಣ ಇಲಾಖೆ ಈ ಬಗ್ಗೆ ಶಾಲೆಗಳಿಗೆ ಸೂಚನೆ ನೀಡುತ್ತವೆ, ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಪೊಲೀಸ್ ಇಲಾಖೆ ನಿಯಮಗಳ ಪಾಲನೆಯನ್ನು ಖಾತ್ರಿಪಡಿಸಬೇಕಗುತ್ತದೆ. ಉಲ್ಲಂಘನೆ ಮಾಡುವವರ ವಿರುದ್ಧ ಅವರೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಅದು ಅನೂಚಾನವಾಗಿ ನಡೆಯುತ್ತಿಲ್ಲ.
ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಶಾಲಾ ವಾಹನಗಳ ಸುರಕ್ಷತೆಯ ಬಗ್ಗೆ ಸುತ್ತೋಲೆಯನ್ನೂ ಹೊರಡಿಸಲಾಗಿದೆ. ಅದನ್ನು ಎಲ್ಲ ಶಾಲೆಗಳು ಪಾಲಿಸಲೇಬೇಕು ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ. ಸರ್ಕಾರಿ ಶಾಲೆಗಳಿಗೆ ಸ್ಥಳೀಯ ಮಕ್ಕಳೇ ಪ್ರವೇಶ ಪಡೆಯುವುದರಿಂದ ವಾಹನ ಬಳಕೆ ಅಗತ್ಯ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.
ಎಲ್ಲ ಖಾಸಗಿ ಶಾಲೆಗಳ ಪ್ರಾಂಶುಪಾಲರ ಸಭೆ ಕರೆದು ಚರ್ಚೆ ನಡೆಸಲಾಗಿದೆ. ಯಾವೆಲ್ಲ ನಿಯಮ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲತವಾಡ ಹೇಳಿದರು. * ನಿಯಮ ಉಲ್ಲಂಘನೆಯ ನಿರ್ದಿಷ್ಟ ಪ್ರಕರಣಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಕ್ರಮ ಕೈಗೊಳ್ಳಲಾಗುವುದು. -ಎನ್.ಎಚ್. ನಾಗೂರ ಡಿಡಿಪಿಐ