ಹುಬ್ಬಳ್ಳಿ: ಕರ್ನಾಟಕ ಏಕೀಕರಣ ಪರಿಷತ್ತಿನ ಮೊದಲ ಮತ್ತು ದ್ವಿತೀಯ ಅಧಿವೇಶನದ ಅಧ್ಯಕ್ಷರಾಗಿದ್ದ ಸರ್. ಸಿದ್ದಪ್ಪ ಕಂಬಳಿ ಅವರ 138ನೇ ಜನ್ಮದಿನದ ಅಂಗವಾಗಿ ಶುಕ್ರವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಿದ್ದಪ್ಪ ಕಂಬಳಿ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ತಾಲ್ಲೂಕು ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡ ಸದಾನಂದ ಡಂಗನವರ ಸೇರಿದಂತೆ ಹಲವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಸುರೇಶ ಲಿಂಬಿಕಾಯಿ, ಎಂ.ಎಂ. ನುಚ್ಚಿ, ಪ್ರಾಧ್ಯಾಪಕ ಎಚ್.ಬಿ. ಬೆಳಗಲಿ ಇದ್ದರು.
ಕಂಬಳಿ ಅವರು ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮುಂಬೈ ಪ್ರೆಸಿಡೆನ್ಸಿಯಲ್ಲಿ ಹಲವಾರು ಖಾತೆಗಳನ್ನು ನಿಭಾಯಿಸಿದ್ದರು. ಶಿಕ್ಷಣ ಸಚಿವರಾಗಿದ್ದಾಗ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮರೆಯಲಾಗದ ಕೊಡುಗೆ ನೀಡಿದ್ದಾರೆ ಎಂದು ಅವರ ಕಾರ್ಯವನ್ನು ವಿವಿಧ ಸಂಘಟನೆಗಳ ಮುಖಂಡರು ಸ್ಮರಿಸಿದರು.
ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಶಿವರುದ್ರ ಟ್ರಸ್ಟ್ ನಿರ್ದೇಶಕ ಬಸವಕುಮಾರ ತಲವಾಯಿ, ಆನಂದ ಘಟಪನದಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಕಾರ್ಯದರ್ಶಿ ಮೃತ್ಯುಂಜಯ ಮಟ್ಟಿ, ಡಾ. ಎಂ.ಎಂ.ನುಚ್ಚಿ, ಶಿವಕುಮಾರ ಬಳಿಗಾರ, ಬಸವರಾಜ ಬಳಿಗಾರ, ಸೋಮಶೇಖರ ಪಾಲ್ಗೊಂಡಿದ್ದರು.