ಹುಬ್ಬಳ್ಳಿ: ದೂಳು, ತಗ್ಗು–ಗುಂಡಿಗಳಿಂದ ಸ್ವಾಗತಿಸೋ ರಸ್ತೆ, ಮಳೆ ಬಂದರೆ ಬರದಿದ್ದರೂ ಚರಂಡಿ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತದೆ. ಇನ್ನೂ ಕುಡಿಯುವ ನೀರಿಗಂತೂ ದಿನ ಕಾಯಲೇಬೇಕು. ವಿದ್ಯುತ್ ಇಲ್ಲದೆ ಸಂಜೆಯಾಗುತ್ತಲೇ ಕತ್ತಲು ಆವರಿಸುವ ಕಾಲೊನಿ...
ಇದು ಹಳ್ಳಿಯ ವ್ಯವಸ್ಥೆಯೇನು ಅಲ್ಲ ಬದಲಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ವ್ಯಾಪ್ತಿಗೆ ಬರುವ ಕಾಲೊನಿಯ ವ್ಯಥೆ.
ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ 2010 ನವೆಂಬರ್ 4ರಿಂದ ಪಾಲಿಕೆಗೆ ಹಸ್ತಾಂತರಗೊಂಡ 59ನೇ ವಾರ್ಡ್ನ 6ನೇ ವಲಯ ವ್ಯಾಪ್ತಿಗೆ ಬರುವ ಸರಸ್ವತಿಪುರ ಬಡಾವಣೆಯಲ್ಲಿ 105ಕ್ಕಿಂತ ಹೆಚ್ಚು ಮನೆಗಳಿವೆ. 75 ಮನೆಗಳು ನಿರ್ಮಾಣ ಹಂತದಲ್ಲಿವೆ. ಆದರೆ, ಇಲ್ಲಿನ ನಿವಾಸಿಗಳಿಗೆ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪಾಲಿಕೆ ಬಾಗಿಲು ತಟ್ಟುತ್ತಿದ್ದರೂ ಅಧಿಕಾರಿಗಳು ಮಾತ್ರ ಸೌಲಭ್ಯ ಕಲ್ಪಿಸುತ್ತಿಲ್ಲ ಎಂಬುದು ಇಲ್ಲಿನ ನಿವಾಸಿಗರ ಆರೋಪವಾಗಿದೆ.
ಸಮಸ್ಯೆಗಳ ಕುರಿತು ಪಾಲಿಕೆ ಸದಸ್ಯೆ ಕಲ್ಲಕುಂಟಲಾ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದು ಆದರೆ ಅಷ್ಟು ಪ್ರಗತಿ ಆಗಿಲ್ಲ. ಸಮರ್ಪಕ ಸೌಲಭ್ಯ ಕಲ್ಪಿಸಿ.ಜಗದೀಶ ಹೊಂಬಳ, ಸರಸ್ವತಿ ಪುರ ನಿವಾಸಿ
ಮೂಲ ಸೌಕರ್ಯಗಳಾದ ಪಕ್ಕಾ ರಸ್ತೆ, ಗಟಾರು, ಬೀದಿ ದೀಪ ಮತ್ತು ನಿರಂತರ 24 x7 ಕುಡಿಯುವ ನೀರಿನ ಸರಬರಾಜು ಹಾಗೂ ರಸ್ತೆಗಳಿಗೆ ಪೇವರಸ ಮತ್ತು ಗಟಾರು ನಿರ್ಮಾಣ ಸೇರಿದಂತೆ ಹಲವಾರು ಸೌಲಭ್ಯಗಳ ಬೇಡಿಕೆ ಇಲ್ಲಿನ ಜನರದ್ದಾಗಿದೆ.
‘ನಿತ್ಯ ಒಂದಿಲ್ಲೊಂದು ಸಮಸ್ಯೆಯನ್ನು ನಾವು ಎದುರಿಸುತ್ತಿದ್ದೇವೆ. ಮಳೆ ಬಂದರಂತೂ ರಸ್ತೆ ಮೇಲೆ ಓಡಾಡ ಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆಯಲ್ಲಾ ಕೆಸರು ಗದ್ದೆಯಂತಾಗುತ್ತದೆ. ಎಷ್ಟೊ ಜನರು ಬಿದ್ದು ಗಾಯ ಮಾಡಿಕೊಂಡ ಉದಾಹರಣೆಗಳಿದ್ದು, ಅಷ್ಟೇ ಅಲ್ಲದೇ ಬೀದಿ ದೀಪದ ವ್ಯವಸ್ಥೆಯೂ ಸರಿಯಾಗಿಲ್ಲ. ರಾತ್ರಿ ಓಡಾಡಲು ಭಯವಾಗುತ್ತದೆ. ಕತ್ತಲಾಗುತ್ತಿದ್ದಂತೆ ಬೇಗನೇ ಮನೆ ಸೇರಬೇಕಾದ ಸ್ಥಿತಿಯಿದೆ. ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ’ ಎಂದು ಸರಸ್ವತಿ ಪುರಂ ನಿವಾಸಿ ಜಗದೀಶ ಹೊಂಬಳ ತಿಳಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿಗೂ ಕೂಡ ಪಾಲಿಕೆಯಿಂದ ಕ್ರಮ ಕೈಗೊಳ್ಳುತ್ತಿದೆ. ಶೀಘ್ರದಲ್ಲಿ ಸರಸ್ವತಿಪುರಂ ಕಾಲೊನಿಯ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ.ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತರು
‘2013 ಜೂನ್ನಿಂದ ಇಲ್ಲಿ ವಾಸವಿದ್ದೇವೆ. ನಮಗೆ ಇಲ್ಲಿಯವರೆಗೂ ಯಾವುದೇ ಮೂಲ ಸೌಲಭ್ಯ ಸಿಕ್ಕಿಲ್ಲ. ಕುಡಿಯಲು ನೀರು, ಬೀದಿ ದೀಪ ವ್ಯವಸ್ಥೆ ಇಲ್ಲ, ಹದಗೆಟ್ಟ ರಸ್ತೆ ಮತ್ತು ಸ್ಟ್ರೀಟ್ ಲೈಟ್ಗಳು ತುಂಬಾ ಕಡಿಮೆ ಇವೆ. ಇಲ್ಲಿ ನಿತ್ಯ ನೂರಾರು ಜನರು ಓಡಾಡುತ್ತಾರೆ. ನಿರಂತರ ಸೌಲಭ್ಯಗಳು ಮಾತ್ರ ಇಲ್ಲ. 2009ರಲ್ಲಿಯೇ ನಿರಂತರ ನೀರು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಾ ಬಂದರೂ ಅಧಿಕಾರಿಗಳು ಬಂದು ಸರ್ವೆ ಮಾಡಿ ಹೋಗುತ್ತಾರೆ. ಆದರೆ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮನವಿ ಸಲ್ಲಿಸಿದಾಗ ಬಂದು ಭೇಟಿ ನೀಡುವ ಅಧಿಕಾರಿಗಳು ಮತ್ತೆ ಬರುವುದಿಲ್ಲ’ ಎಂದು ಇಲ್ಲಿನ ನಿವಾಸಿ ಪ್ರಕಾಸ ಯಳವತ್ತಿ ತಿಳಿಸಿದರು.
‘ಈಗಾಗಲೇ ಮಹಾನಗರ ಪಾಲಿಕೆಯಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಎಲ್ಲ ರೀತಿಯ ಕಾರ್ಯ ಮಾಡಲಾಗುತ್ತಿದೆ. ಅದರಡಿ ಈ ನಗರಕ್ಕೂ ನೀರು ಸರಬರಾಜು ಮಾಡಲಾಗುವುದು. ಅಗತ್ಯ ಸೌಲಭ್ಯಗಳ ಬೇಡಿಕೆ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.