ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಯುಕ್ತರ ನೇಮಕ ಕಗ್ಗಂಟು

ಕಾಂಗ್ರೆಸ್‌ ನಾಯಕರ ಒತ್ತಡ; ಇಕ್ಕಟ್ಟಿನಲ್ಲಿ ಸಚಿವ ದಿನೇಶ್‌?
Last Updated 25 ಅಕ್ಟೋಬರ್ 2014, 6:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಪೂರ್ಣಾವಧಿ ಆಯು­ಕ್ತರಿಲ್ಲದೇ ಎರಡು ತಿಂಗಳು ಗತಿಸಿವೆ. ಈ ನಡುವೆ, ಕೆಲ ಕಾಂಗ್ರೆಸ್‌ ಮುಖಂಡರು ತಮಗೆ ಆಪ್ತರಾಗಿರುವ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್ ಅವರಿಗೆ ದುಂಬಾಲು ಬಿದ್ದಿ­ದ್ದಾರೆ ಎಂದು ಹೇಳಲಾಗಿದೆ, ಹೀಗಾಗಿ  ಸಚಿ­ವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ ಎನ್ನ­ಲಾಗುತ್ತಿದೆ.

ಆದರೆ, ಹಿರಿಯ ಕೆಎಎಸ್‌ ಅಧಿಕಾರಿ ನೂರ್‌ ಅಹ್ಮದ್‌ ಎಂಬುವರನ್ನು ಮಹಾನಗರ ಪಾಲಿಕೆ ಆಯುಕ್ತರ ಹುದ್ದೆಗೆ ವರ್ಗಾವಣೆ ಮಾಡಬೇಕು ಎಂದು ಸಚಿವರು ನಿರ್ಧರಿಸಿದ್ದಾರೆ ಎಂದು ವಿಶ್ವಸ­ನೀಯ ಮೂಲಗಳು ತಿಳಿಸಿವೆ. ಆದರೆ, ಈ ಭಾಗದ ಕಾಂಗ್ರೆಸ್‌ನ ಕೆಲ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ತಾವು ಹೇಳಿದ ಅಧಿಕಾರಿಯನ್ನೇ ಆಯುಕ್ತರನ್ನಾಗಿ ನೇಮಿಸಬೇಕು ಎಂದು ಪಟ್ಟು ಹಿಡಿದಿರುವುದರಿಂದ ಸಚಿವರು ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಸದಸ್ಯ­ರೊಬ್ಬರು ಹೇಳಿದರು.

ಈ ನಡುವೆ, ಆಯುಕ್ತರ ಹುದ್ದೆಗೆ ಹಲವು ಹಿರಿಯ ಅಧಿಕಾರಿಗಳ ಹೆಸರು ಸಹ ಕೇಳಿ ಬರು­ತ್ತಿವೆ. ಈ ಹಿಂದೆ ಇಲ್ಲಿ ಆಯುಕ್ತರಾಗಿದ್ದ ವೈ.ಎಸ್‌.­ಪಾಟೀಲ ಹಾಗೂ ಮತ್ತೊಬ್ಬ ಕೆಎಎಸ್‌ ಅಧಿಕಾರಿ ಮಹಾಂತೇಶ ಬೀಳಗಿ ಅವರ ಹೆಸರುಗಳು ಕೇಳಿ ಬರುತ್ತಿವೆ.
ವೈ.ಎಸ್‌.ಪಾಟೀಲ ಅವರು ಪುನಃ ಮಹಾನಗರ ಪಾಲಿಕೆ ಆಯುಕ್ತರಾಗಿ ಕಾರ್ಯನಿರ್ವಹಿಸಲು ಆಸಕ್ತಿ ತೋರಿಸಿಲ್ಲ ಎನ್ನಲಾಗುತ್ತಿದ್ದರೆ, ಮಹಾಂ­ತೇಶ ಬೀಳಗಿ ಅವರ ಅಭಿಪ್ರಾಯವೂ ಇದೇ ಆಗಿದೆ ಎಂದು ಈ ಸದಸ್ಯರು ಹೇಳಿದರು.

‘ಪಾಲಿಕೆಗೆ ಪೂರ್ಣಾವಧಿ ಆಯುಕ್ತರನ್ನು ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇನೆ. ಆದರೆ, ಈ ವಿಷಯದಲ್ಲಿ ಸಚಿವರು ಯಾಕೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಮೇಯರ್ ಶಿವು ಹಿರೇಮಠ ಪ್ರತಿ­ಕ್ರಿಯಿ­ಸಿದರು. 

ಪೂರ್ಣಾವಧಿ ಆಯುಕ್ತರಿಲ್ಲದೇ ಸಮಸ್ಯೆ ಆಗುತ್ತಿದೆ. ಅಭಿವೃದ್ಧಿ ಕಾರ್ಯಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಹೀಗಾಗಿ ಆಯುಕ್ತರನ್ನು ನೇಮಕ ಮಾಡುವಂತೆ ಬಿಜೆಪಿ ಹಾಗೂ ಕೆಲವು ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮನವಿ ಸಲ್ಲಿ­ಸಿವೆ.

ಆಯುಕ್ತರಿಲ್ಲದ ಕಾರಣ ಕೆಲವು ಆಡಳಿತಾತ್ಮಕ ವಿಷಯಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂದು ಸ್ವತಃ ಪಾಲಿಕೆ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

‘ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಪ್ರತಿ ವಾರ್ಡ್‌ಗೆ ₨ 15 ಲಕ್ಷ ಬಿಡುಗಡೆ ಮಾಡುವುದಾಗಿ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ನಡೆದ ಎರಡನೇ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಲಾಗಿತ್ತು. ಈ ವರೆಗೂ ಈ ಅನುದಾನ ಬಿಡುಗಡೆಯಾಗಿಲ್ಲ. 13ನೇ ಹಣಕಾಸು ಯೋಜನೆಯ ಅನುದಾನಕ್ಕೂ ಇದೇ ಗತಿ ಬಂದಿದೆ. ಸಂಬಂಧಪಟ್ಟ ಕಡತಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿವೆ. ಅವರೊಂದಿಗೆ ಚರ್ಚಿಸಿ, ಅಗತ್ಯವಿರುವ ಬದಲಾವಣೆಗಳನ್ನು ಮಾಡು­ವುದು, ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆಯುವುದು, ಅನುದಾನ ಬಿಡುಗಡೆಗೆ ಪ್ರಯತ್ನಿಸುವ ಕೆಲಸಕ್ಕೆ ಆಯುಕ್ತರು ಅಗತ್ಯ’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಯಾಸಿನ್‌ ಹಾವೇರಿಪೇಟ ಹೇಳಿದರು.


‘ಶೀಘ್ರವೇ ಆಯುಕ್ತರನ್ನು ನೇಮಕ ಮಾಡು­ವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿ­ದ್ದೇವೆ. ಅವರೇ ಈ ಬಗ್ಗೆ ನಿರ್ಧಾರ ಕೈಗೊಳ್ಳ­ಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT