ಹುಬ್ಬಳ್ಳಿ: `ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ) ಆವರಣದಲ್ಲಿ 65 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸದ್ಯದಲ್ಲೆ ಮಂಜೂರಾತಿ ನೀಡಲಾಗುವುದು' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.
ಕಿಮ್ಸ ಮಕ್ಕಳ ಚಿಕಿತ್ಸಾ ಘಟಕದಲ್ಲಿ `ಪೌಷ್ಟಿಕತೆಯ ಪುನಶ್ಚೇತನ ಕೇಂದ್ರ'ವನ್ನು (ಎನ್ಆರ್ಸಿ) ಸೋಮವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ` ಕಿಮ್ಸ ಆವರಣದಲ್ಲೇ 6.50 ಕೋಟಿ ರೂಪಾ ಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 300 ಹಾಸಿಗೆಗಳ ಕಾರ್ಡಿಯೋಥೆರಪಿ ಮತ್ತು ಕಾರ್ಡಿಯೋಲಜಿ ಆಸ್ಪತ್ರೆಯ ಕಾಮಗಾರಿ ಫೆಬ್ರುವರಿ ತಿಂಗಳೊಳಗೆ ಪೂರ್ಣವಾಗಲಿದೆ' ಎಂದರು.
`ಕಾನೂನು ಪರಿಮಿತಿಯೊಳಗೆ ಕಿಮ್ಸಗೆ ದಾದಿಯರ ನೇಮಕಾತಿ ಮಾಡಿಕೊಳ್ಳಲಾಗುವುದು ಮತ್ತು ಅವರ ಬೇಡಿಕೆಗಳನ್ನು ಪರಿಗಣಿಸಲಾಗುವುದು. 1998-99ನೇ ಬ್ಯಾಚಿನ ತಹಶೀಲ್ದಾರ್ ಮಟ್ಟದ ಅಧಿಕಾರಿಗಳ ಬಡ್ತಿ ಸಂಬಂಧಿಸಿದ ಪ್ರಕ್ರಿಯೆಗೆ ಸದ್ಯದಲ್ಲೆ ಕ್ರಮ ತೆಗೆದುಕೊಳ್ಳ ಲಾಗುವುದು' ಎಂದರು.
`ಉತ್ತರ ಕರ್ನಾಟಕ ಭಾಗದಲ್ಲಿ ನೂರಾರು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಎನ್ಆರ್ಸಿ ಕೇಂದ್ರದಲ್ಲಿ ಇಂತಹ ಮಕ್ಕಳ ಆರೋಗ್ಯ ಪಾಲನೆ ಮಾಡಲಾಗುವುದು' ಎಂದು ಶೆಟ್ಟರ್ ತಿಳಿಸಿದರು.
ಕಿಮ್ಸ ನಿರ್ದೇಶಕಿ ವಸಂತಾ ಕಾಮತ್, `20 ಹಾಸಿಗೆ ಗಳನ್ನು ಹೊಂದಿರುವ ಎನ್ಆರ್ಸಿಯಲ್ಲಿ ಅಪೌಷ್ಟಿಕತೆ ಯಿಂದ ನರಳುತ್ತಿರುವ ಮಕ್ಕಳಿಗೆ ದಿನದ 24 ಗಂಟೆಗೆ ಆರೈಕೆ ಮಾಡಲಾಗುವುದು.
ಅಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ತಾಯಂದಿರಿಗೂ ತರಬೇತಿ ನೀಡಲಾಗುವುದು' ಎಂದರು. ಸಂಸದ ಪ್ರಹ್ಲಾದ ಜೋಶಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಕಿಮ್ಸ ಪ್ರಾಂಶುಪಾಲ ಯು.ಎಸ್.ಹಂಗರಗಾ, ಡಾ.ಟಿ.ಎ.ಶೆಪೂರ್ ಮತ್ತಿತರರು ಇದ್ದರು.