ಶಿವಮೊಗ್ಗ/ತೀರ್ಥಹಳ್ಳಿ: ಶಿವಮೊಗ್ಗ ತಾಲ್ಲೂಕಿನ ಶೆಟ್ಟಿಹಳ್ಳಿ, ಕರಡಿಮಟ್ಟಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವಲಯ ಅರಣ್ಯ ವ್ಯಾಪ್ತಿಯ ಕನ್ನಂಗಿ ಸಮೀಪದ ಕುಚ್ಚಲು ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡುಕೆಲವುಸಮಯ ಆತಂಕ ಸೃಷ್ಟಿಸಿತ್ತು.
ಕಾಡಿನಲ್ಲಿ ಬೆಂಕಿ ಉರಿಯುತ್ತಿರುವ ದೃಶ್ಯ ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆಬಂದ ಅರಣ್ಯ ಇಲಾಖೆ, ಅಗ್ನಿಶಾಮಕಸೇವೆಯಸಿಬ್ಬಂದಿ ಗ್ರಾಮಸ್ಥರ ಸಹಕಾರ ಪಡೆದು ಬೆಂಕಿ ನಂದಿಸಿದ್ದಾರೆ.
ನೆಲಕ್ಕೆ ಹಬ್ಬಿದ ಬೆಂಕಿಯಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಎಲೆ ಉದುರುವ ಕಾಡಿನ ಪ್ರದೇಶವಾದ ಕಾರಣ ಬೆಂಕಿ ಬೇಗನೆ ವ್ಯಾಪಿಸಿದೆ.ಕಾಡಿನ ತುಂಬೆಲ್ಲಾ ಒಣ ಎಲೆಗಳು ನೆಲದ ಮೇಲೆ ಹಾಸಿದೆ. ತಕ್ಷಣ ಬೆಂಕಿ ನಂದಿಸಿರುವ ಪರಿಣಾಮ ದೊಡ್ಡ ಅನಾಹುತ ತಪ್ಪಿದೆಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಶೆಟ್ಟಿಹಳ್ಳಿ ಅಭಯಾರಣ್ಯ ಜಿಂಕೆ.ಕಡವೆ, ಕಾಡೆಮ್ಮೆ, ಆನೆಗಳು ಸೇರಿದಂತೆ ಬಹುತೇಕ ವನ್ಯಜೀವಿಗಳ ತಾಣ. ತೇಗ, ಹೊನ್ನೆ, ಶ್ರೀಗಂಧದಂತಹ ಬೆಲೆ ಬಾಳುವ ಮರಗಳ ಬೀಡು. ಬೆಂಕಿ ಇನ್ನಷ್ಟು ವ್ಯಾಪಿಸಿದ್ದರೆ ಭಾರಿ ಅನಾಹುತವಾಗುತ್ತಿತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.