ವಿಜಯಪುರ: ‘ಆರೋಗ್ಯಯುತ ಬದುಕಿಗೆ ದುಡ್ಡು ಮುಖ್ಯವಲ್ಲ. ಶಿಸ್ತು, ಏಕಾಗ್ರತೆ, ಗುರಿ ಸಾಧನೆಗೆ ಪೂರಕವಾಗಿರುವ ಯೋಗವನ್ನು ರೂಢಿಸಿಕೊಳ್ಳಬೇಕು’ ಎಂದು ನಿವೃತ್ತ ಜಿಲ್ಲಾ ನೋಂದಣಾಧಿಕಾರಿ ಎನ್.ಎಸ್.ಹೂವಿನಳ್ಳಿ ಹೇಳಿದರು.
ನಗರದ ಬಸವೇಶ್ವರ ಕಾಲೊನಿಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ನಿವೃತ್ತ ನೌಕರರ ಸಂಘದ ಆಶ್ರಯದಲ್ಲಿ ವಿಶ್ವಯೋಗ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗಾಗಿ ಮಂಗಳವಾರ ಆಯೋಜಿಸಿದ್ದ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಎಂ.ಎನ್.ದಿಂಡೂರ ಮಾತನಾಡಿ, ‘ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು. ಉತ್ತಮ ಆಲೋಚನೆ, ಸಾಧನೆಗಾಗಿ ಯೋಗದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
ಯೋಗ ಗುರು ಬಿ.ಎಂ.ಮಸಬಿನಾಳ ಅವರು, ಯೋಗದ ಅರ್ಥ, ವ್ಯಾಪ್ತಿ, ಯೋಗ ವ್ಯಾಖ್ಯೆಗಳು, ಯೋಗ ಪಥಗಳು ಹಾಗೂ ಯೋಗದ ನಿಯಮಗಳನ್ನು ತಿಳಿಸಿದರು.
ಸೇವಾ ದಳದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಬಿ.ಬಿರಾದಾರ ಮಾತನಾಡಿ, ‘ಯೋಗ ಬದುಕಿನ ಕಲೆ. ನಾವು ಬದುಕುವುದು ಏಕೆ, ಹೇಗೆ ಎಂದು ತಿಳಿಸಿ ಕೊಡುವ ಬದುಕಿನ ಕಲೆಯೇ ಯೋಗ ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಸಂಘಟಕ ನಾಗೇಶ ಡಿ.ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎ.ಪಾಟೀಲ ಇದ್ದರು. ಡಿ.ಬಿ.ಹಿರೇಕುರಬರ ಸ್ವಾಗತಿಸಿದರು. ಎ.ಎಸ್.ಡೂಣೂರ ವಂದಿಸಿದರು.