ಗಜೇಂದ್ರಗಡ: ‘ರಾಜ್ಯ ಸರ್ಕಾರ ಗೊಲ್ಲ ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಸ್ಥಳೀಯ ಗೊಲ್ಲ ಸಮಾಜದ ಮುಖಂಡರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
'ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 35-40 ಲಕ್ಷಕ್ಕಿಂತ ಹೆಚ್ಚಿರುವ ಗೊಲ್ಲ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದೆ. ಹೀಗಾಗಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿರುವುದು ಸ್ವಾಗತ. ಆದರೆ ರಾಜ್ಯ ಸರ್ಕಾರ 'ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ' ಸ್ಥಾಪಿಸಲು ಆದೇಶಿಸಿರುವುದು ಇಡೀ ಗೊಲ್ಲ ಸಮುದಾಯದ ವಿವಿಧ ಪಂಗಡಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿರುವ ಗೊಲ್ಲ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮನ್ನು ಅಲೆಮಾರಿ ಪಟ್ಟಿಯಿಂದಲೂ ತೆಗೆದು ಹಾಕುತ್ತಾರೇನೊ ಎಂಬ ಅನುಮಾನಗಳು ಮೂಡುತ್ತಿವೆ' ಎಂದು ಸಮಾಜದ ಮುಖಂಡರು ದೂರಿದರು.
'ಕೆಲ ಜಿಲ್ಲೆಗಳ ಜನರಿಗೆ ಅನುಕೂಲವಾಗುವ ರೀತಿ ನಿಗಮ ಸ್ಥಾಪಿಸುವುದು ಖಂಡನೀಯ. ಆದ್ದರಿಂದ ರಾಜ್ಯ ಸರ್ಕಾರ ಗೊಲ್ಲ ಸಮುದಾಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅಖಂಡ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ' ಎಚ್ಚರಿಸಿದರು.
ಗೊಲ್ಲ ಸಮಾಜದ ಮುಖಂಡರಾದ ಪರಶುರಾಮ ಮ್ಯಾಗೇರಿ, ಪರಶುರಾಮ ಗೌಡರ, ಶರಣಪ್ಪ ದಿವಾಣದ, ಕಳಕಪ್ಪ ಗುಳೇದ, ನಾಗರಾಜ ಮ್ಯಾಗೇರಿ, ಬಾಳಪ್ಪ ಗೌಡ್ರ, ಮಲ್ಲು ಗೌಡರ, ಹನಮಂತಪ್ಪ ಬೊನೆರಿ, ಮುತ್ತಣ್ಣ ಗೌಡ್ರು, ದೇವಪ್ಪ ವರಗಾ, ಮುತ್ತು ಮ್ಯಾಗೇರಿ, ಮುತ್ತು ವರಗಾ, ಶ್ರೀಧರ ದಿವಾಣದ, ಮಂಜು ವರಗಾ, ಮುತ್ತು ದಿವಾಣದ, ಕಳಕಪ್ಪ ಕುರಿ, ಸಂತೋಷ ದಿವಾಣದ, ಕಳಕಪ್ಪ ಕಲಾಲಬಂಡಿ, ಮುದಕಪ್ಪಬೊನೆರಿ, ಕಳಕಪ್ಪ ದಿವಾಣದ, ದೇವಪ್ಪ ಗುಳೇದ, ದೇವು ತಾತಲ, ಕಳಕಪ್ಪ ನರಿ, ಶಿವರಾಜ , ಮ್ಯಾಕಲಝರಿ, ಜಕ್ಕಲಿ, ಹೂವಿನ ಹಡಗಲಿ, ಹಿರೇಬೆಲೆರಿ, ಕಾಲ ಕಾಲೇಶ್ವರ ಗ್ರಾಮಗಳ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.