ಗದಗ: ‘ಒಬ್ಬ ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಮತ್ತು ತಿಲಕ ಇಟ್ಟುಕೊಂಡವರನ್ನು ಕಂಡರೆ ಭಯಪಡುವ ಮತ್ತೊಬ್ಬ ವ್ಯಕ್ತಿಯಿಂದ ಕರ್ನಾಟಕದ ಜನತೆ ಯಾವ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ’ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ನಡೆದ ಮೋದಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿರುವುದು ಲೂಟಿ ಸರ್ಕಾರ. ಸಾಲಮನ್ನಾ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ರೈತರನ್ನು ಮರೆತಿದ್ದಾರೆ. ರೈತರ ಅಭಿವೃದ್ಧಿ ಕೇಂದ್ರದಿಂದಲೇ ಆಗುತ್ತಿದ್ದು, ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದ 50 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಪ್ರಯೋಜನವಾಗಲಿದೆ. ಆದರೆ, ಜನರು ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚುತ್ತಾರೆ ಎಂಬ ಭಯದಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಈ ಯೋಜನೆಗೆ ತಡೆಯೊಡ್ಡುತ್ತಿದೆ’ ಎಂದರು.
ಅಮೇಠಿಗೆ ರೈಲು: ‘ಜವಾಹರಲಾಲ್ ನೆಹರು, ಇಂದಿರಾಗಾಂಧಿ ನಂತರ ರಾಜೀವ್ ಗಾಂಧಿ ಹೀಗೆ ಮೂರು ತಲೆಮಾರು ಅಮೇಠಿಗೆ ರೈಲು ತರುವುದಾಗಿ ಹೇಳಿ ಚುನಾವಣೆ ಎದುರಿಸಿತು. ಆದರೆ, ರೈಲು ಬರಲಿಲ್ಲ. ಮೋದಿ ಪ್ರಧಾನಿ ಆದ ಬಳಿಕ ಅಮೇಠಿಗೆ ರೈಲು ಬಂದಿದೆ. ಈಗ ಅದೇ ಕುಟುಂಬದ ನಾಲ್ಕನೆಯ ತಲೆಮಾರಿನವರು ಅಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಮೇಠಿ ಕ್ಷೇತ್ರವನ್ನೇ ಅಭಿವೃದ್ಧಿಪಡಿಸಲು ಆಗದವರು ಈ ದೇಶವನ್ನು ಅಭಿವೃದ್ಧಿ ಪಡಿಸುತ್ತಾರಾ’ ಎಂದರು.
‘ದೇಶದ ಸುಸ್ಥಿರ ಪ್ರಗತಿಗೆ ಪ್ರಧಾನಿ ಮೋದಿ ಅವರಿಗೆ ಮತ್ತೊಮ್ಮೆ ಪ್ರಧಾನ ಸೇವಕನಾಗುವ ಅವಕಾಶ ನೀಡಿ’ ಎಂದು ಮನವಿ ಮಾಡಿದರು.
‘ರಾಜ್ಯದ ಮುಖ್ಯಮಂತ್ರಿ ನಂಬಿಕೆ ದ್ರೋಹಿ, ವಿಶ್ವಾಸದ್ರೋಹಿ. ಸಾಲಮನ್ನಾ ಮಾಡುವುದಾಗಿ ಹುಸಿ ಭರವಸೆ ನೀಡುತ್ತಾ ರೈತರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. 170 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ದೂರಿದರು.
ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ ಗದ್ದಿಗೌಡರ, ಶಾಸಕರಾದ ಬಿ. ಶ್ರೀರಾಮುಲು, ಸಿ.ಸಿ ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ಇದ್ದರು.