ರೋಣ: ಗದಗ ಜಿಲ್ಲೆಯ ಬಳಗಾನೂರು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ತೆರವು ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ, ವತಿಯಿಂದ ತಹಶೀಲ್ದಾರ್ ಜೆ.ಬಿ.ಜಕ್ಕನಗೌಡ್ರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನೀಲಗಾರ ಮಾತನಾಡಿ, ಅಕ್ಟೋಬರ್ 10 ರಂದು ಬಳಗಾನೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಪರವಾನಗಿಯನ್ನು ಪಡೆದುಕೊಂಡು ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಿ ಬೆಳಗಿನ ಜಾವದಲ್ಲಿ ರಾಯಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಎಲ್ಲ ದಾಖಲೆಗಳನ್ನು ಒದಗಿಸಿದ್ದರು ಕೂಡ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ಮೆರೆಗೆ ಠರಾವು ಪಾಸ್ ಮಾಡಲಾಗಿದೆ. ಜಿಲ್ಲಾಡಳಿತವು ರಾಜಕೀಯ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ರಾಯಣ್ಣನವರ ಮೂರ್ತಿಯನ್ನು ತೆರವುಗೊಳಿಸಿದೆ. ಜಿಲ್ಲಾಡಳಿತವು ರಾಯಣ್ಣನವರ ಮೂರ್ತಿಯನ್ನು ಪುನಃ ಅದೇ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಬೇಕು. ಒಂದು ವೇಳೆ ಪುನಃ ಮೂರ್ತಿ ಪ್ರತಿಷ್ಠಾಪನೆ ಮಾಡದಿದ್ದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿ.ವಿ.ರಡ್ಡೆರ, ಸಂತೋಷ ಕಡಿವಾಲ, ನಾಗರಾಜ ಮಾಲಿಪಾಟೀಲ, ರವಿ ಕರಿಯಣ್ಣವರ, ಬಸವರಾಜ ಕಾತರಕಿ, ವಿ.ಪಿ.ಹಕಾರಿ, ಬಸವರಾಜ ಕುರಿ, ಜಗದೀಶ ಸತ್ತಪ್ಪನವರ ಇದ್ದರು.