ಹೊಳೆಆಲೂರ (ರೋಣ ತಾ.): ಹೊಳೆಅಲೂರ ಗ್ರಾಮದ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರವಾಗುತ್ತಿದ್ದ ನೀರು ಹರಿದು ಹೋಗುವಂತೆ ನೈಋತ್ಯ ರೈಲ್ವೆ ಇಲಾಖೆ 1ಕೋಟಿ ರೂಪಾಯಿ ವೆಚ್ಚದಲ್ಲಿ ಗಟಾರ ನಿರ್ಮಾಣ ಕಾಮಗಾರಿಯನ್ನು ಕೈಕೊಂಡಿರುವುದು ನಾಗರಿಕರಲ್ಲಿ ಸಂತಸ ಮೂಡಿಸಿದೆ.
ರೈಲ್ವೆ ಕೆಳಸೇತುವೆಯ ಕೆಳಭಾಗದಲ್ಲಿ ಅಲ್ಪ ಮಳೆಯಾದರೂ ಸಾಕಷ್ಟು ಪ್ರಮಾಣದಲ್ಲಿ ನೀರು ನಿಲುಗಡೆಯಾಗಿ ನಾಗರಿಕರು, ವಾಹನ ಸವಾರರು ತೊಂದರೆಗೆ ಒಳಗಾಗುತ್ತಿದ್ದರು. ಅದನ್ನು ಸರಿಪಡಿಸುವಂತೆ ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು, ನಾಗರಿಕರು, ಹೊಳೆಆಲೂರ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ನಡೆಸಿದ ಹೋರಾಟಕ್ಕೆ ಸಂದ ಜಯ ಇದಾಗಿದೆ.
550 ಮೀಟರ್ ಉದ್ದದ ದೊಡ್ಡದಾದ ಗಟಾರವನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, ಮಳೆಗಾಲದ ಅವಧಿಯೊಳಗೆ ಗಟಾರ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವನ್ನು ನೈಋತ್ಯ ರೈಲ್ವೆ ಹೊಂದಿದೆ.ಗಟಾರ ನಿರ್ಮಾಣ ಪೂರ್ಣಗೊಳುವುದರಿಂದ ವಿದ್ಯಾರ್ಥಿನಿಯರಿಗೆ, ಎ.ಪಿ.ಎಂ.ಸಿ.ಗೆ ಆಗಮಿಸುವ ರೈತರಿಗೆ ವ್ಯಾಪಾರಿಗಳಿಗೆ, ಕೊಣ್ಣೂರ, ಶಿರೋಳ ಮೆಣಸಗಿ ಹೊಳೆಮಣ್ಣೂರ ಗಾಡಗೋಳಿ ಗ್ರಾಮಗಳಿಗೆ ತೆರಳುವ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ.