ಹೊಳೆಆಲೂರ(ರೋಣ): ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಮೂಲಸೌಲಭ್ಯಗಳಿಲ್ಲದ ಕಾರಣ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನೈರುತ್ಯ ರೈಲ್ವೆ ವಲಯಕ್ಕೆ ಉತ್ತಮ ಆದಾಯ ತಂದಕೊಡುತ್ತಿದ್ದರೂ ಹೊಳೆಆಲೂರು ರೈಲು ನಿಲ್ದಾಣ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಕರಕುಶಲ ವಸ್ತುಗಳಿಗೆ ಹೊಳೆಆಲೂರು ಪ್ರಸಿದ್ಧಿ. ಇಲ್ಲಿಂದಲೇ ಗದಗ, ವಿಜಾಪುರ ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ಗೃಹ ನಿರ್ಮಾಣಕ್ಕೆ ಬಳಸುವ ಕಟ್ಟಿಗೆ ಸಾಮಗ್ರಿಗಳು, ರಥಗಳು, ದೇವರ ಮೂರ್ತಿಗಳನ್ನು ರೈಲ್ವೆ ಮೂಲಕ ಸಾಗಿಸಲಾಗುತ್ತದೆ. ಅಷ್ಟೇ ಅಲ್ಲ ನೂರಾರು ವಿದ್ಯಾರ್ಥಿಗಳು ಹಾಗೂ ನೌಕರರು ಗದಗ, ಬಾಗಲಕೋಟೆಗೆ ಹೋಗಿ ಬರುತ್ತಾರೆ.
ನೀರಿನ ಟ್ಯಾಂಕ್ ಇದ್ದರೂ ಕುಡಿಯುವ ನೀರಿಲ್ಲ. ಮಹಿಳೆಯರಿಗೆ ಪ್ರತ್ಯೇಕವಾದ ವಿಶ್ರಾಂತಿಗೃಹ, ಶೌಚಾಲಯವಿಲ್ಲ. ನಿಲ್ದಾಣ ಆವರಣದಲ್ಲಿನ ಪರ್ಸಿಕಲ್ಲುಗಳು ಕಿತ್ತು ಹೋಗಿವೆ. ಅಲ್ಲದೇ ನಿಲ್ದಾಣಕ್ಕೆ ಸರಿಯಾದ ಮೇಲ್ಛಾವಣಿ ಕೂಡ ಇಲ್ಲ. ಒಟ್ಟಾರೆ ಅದು ಅವ್ಯವಸ್ಥೆಗಳ ಆಗರವಾಗಿದೆ.
ರೋಣ ಹಾಗೂ ನರಗುಂದ ಪಟ್ಟಣಗಳಿಗೂ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಬಸ್ಸಿನ ಪ್ರಯಾಣ ದರ ಅಧಿಕವಾಗಿರುವ ಕಾರಣ ಬಡ ಹಾಗೂ ಮಧ್ಯಮ ವರ್ಗದವರು ರೈಲಿನಲ್ಲಿ ಪ್ರಯಾಣಿಸಲು ಹೆಚ್ಚು ಇಷ್ಟ ಪಡುತ್ತಾರೆ. ಪ್ರಯಾಣಿಕರು ಮಳೆಯಲ್ಲೇ ರೈಲಿಗಾಗಿ ಕಾಯಬೇಕಾದ ಸ್ಥಿತಿ ಇದೆ.
ನಿಲ್ದಾಣದಲ್ಲಿ ಒಂದು ಉಪಾಹಾರಗೃಹ ಆರಂಭಿಸಲು ಕ್ರಮಕೈಗೊಳ್ಳುವಂತೆ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ವಾಣಿಜ್ಯೋದ್ಯಮ ಸಂಘ ಹಲವು ಬಾರಿ ಮನವಿ ಸಲ್ಲಿಸಿದೆ. ಆದರೆ ಅಧಿಕಾರಿಗಳು ಮೌನಕ್ಕೆ ಶರಣಾದ್ದಾರೆ.ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸಿಕೊಡುವ ದಿಸೆಯಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ.
ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿಯಾಗಿದೆ. ಅವರು ಪ್ರಯಾಣಿಕರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಒಂದ ದಿನ ರೈಲು ತಡೆ ನಡೆಸುತ್ತೇವೆ ಎನ್ನುತ್ತಾರೆ ಹೊಳೆಆಲೂರ ತಾಲ್ಲೂಕು ಹೋರಾಟ ಸಮಿತಿ ಮುಖಂಡ ಮೋತಿಲಾಲ ರಾವಳ.