ನರಗುಂದ: ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ದೇಶದ ಎರಡು ಕಣ್ಣುಗಳು. ಅವರ ಸೇವೆಯನ್ನು ಎಷ್ಟು ಸ್ಮರಿಸಿದರೂ ಕಡಿಮೆ ಎಂದು ಎಸ್ಡಿಎಂಸಿ ಅಧ್ಯಕ್ಷ ಬಿ.ಜಿ.ಪಾಟೀಲ ಹೇಳಿದರು.
ತಾಲ್ಲೂಕಿನ ರಡ್ಡೇರನಾಗನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಸ್ಮರಣೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಟ್ರೂಪ್ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸೈನಿಕರು ತ್ಯಾಗ ಬಲಿದಾನಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಜಯ ಗಳಿಸಿದ್ದು ನಮ್ಮ ಸೇನೆಯ ಬಲ ಹಾಗೂ ಸಾಹಸದ ಸಂಕೇತವಾಗಿದೆ ಎಂದರು.
ನಿವೃತ್ತ ಯೋಧ ಶ್ರೀಶೈಲಪ್ಪ ಹಾದಿಮನಿ ಕಾರ್ಗಿಲ್ ಯುದ್ಧದ ಬಗ್ಗೆ ವವಿರಿಸಿ ಅದನ್ನು ಎಷ್ಟು ನೆನೆದರೂ ಕಡಿಮೆ ಎಂದರು. ಅತಿಥಿಗಳಾಗಿದ್ದ ಶಿರೋಳದ ಸೈನಿಕ ಸುರೇಶ ತಿರಕನಗೌಡ್ರ ಮಾತನಾಡಿ ವಿಷಮ ಪರಿಸ್ಥಿತಿಯಲ್ಲಿ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ಕಾರ್ಗಿಲ್ ಯುದ್ಧದಲ್ಲಿ ಜಯ ಸಾಧಿಸಿದ್ದು ನಮ್ಮ ಸೈನಿಕರ ದೇಶಾಭಿಮಾನ ಸೂಚಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಆಯುಕ್ತ ಎನ್. ಎಚ್. ಜಾಧವ ಸ್ಕೌಟ್ ಮತ್ತು ಗೈಡ್ಸ್ ಟ್ರೂಪ್ಅನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ತಾಲ್ಲೂಕು ಕಾರ್ಯದರ್ಶಿ ಬಿ.ಪಿ.ಶಿರಿಯಪ್ಪಗೌಡ್ರ, ಮುಖ್ಯ ಶಿಕ್ಷಕ ಎಸ್.ಎಸ್.ಮರೋಳ, ಸುರೇಶ ಬನ್ನಿಗಿಡದ, ವಿ.ಬಿ.ಹಿರೇಮಠ, ಸಂತೋಷ ಕವಡಿಮಟ್ಟಿ, ಶರಣಪ್ಪ ಗಟ್ಟಿ ಜಿ.ಬಿ.ಪೂಜಾರ ಸ್ವಾಗತಿಸಿದರು. ಎಂ.ಬಿ.ಯಂಡಿಗೇರಿ ನಿರೂಪಿಸಿದರು. ಎನ್.ವಿ.ಗುದಗಾಪುರ ವಂದಿಸಿದರು.