ಗದಗ: ರಿಚರ್ಡ್ ಫೆನಮನ್ ಪ್ರಾರಂಭಿಸಿದ ನ್ಯಾನೊ ತಂತ್ರಜ್ಞಾನ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಮನ್ವಂತರ ಸೃಷ್ಟಿಸಿದೆ ಎಂದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಡಾ.ವಾಸುದೇವ ಕೆ ಆತ್ರೆ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ನ್ಯಾನೊ-ಅವಶ್ಯಕತೆಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿಯ ದೈನಂದಿನ ಪ್ರಕ್ರಿಯೆ ಅನುಕರಣಿಸುವಲ್ಲಿ ವೈಜ್ಞಾನಿಕ ಸಂಶೋಧನೆಗಳು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಈ ನಿಟ್ಟಿನಲ್ಲಿ ಕೆಲ ವಿಜ್ಞಾನಿಗಳು ಸಂಶೋಧನೆಗಳಲ್ಲಿ ಏಕಾಂಗಿ ಪ್ರಯತ್ನ ನಡೆಸಿದ್ದಾರೆ. ಯುವ ವಿಜ್ಞಾನಿಗಳ ಹೊಸ ವಿಚಾರಗಳು ಮಿಳಿತಗೊಂಡು ಜಗತ್ತಿನ ಅವಶ್ಯಕತೆಗಳನ್ನು ಪೂರೈಸಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿರುವ ನ್ಯಾನೋ ತಂತ್ರಜ್ಞಾನ ಸಂಶೋಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ನ್ಯಾನೊ ತಂತ್ರಜ್ಞಾನ ಕೇವಲ ಭೌತಶಾಸ್ತ್ರಕ್ಕೆ ಸೀಮಿತವಾಗದೆ ಎಲ್ಲ ವಿಜ್ಞಾನ ವಿಭಾಗಗಳ ಅಧ್ಯಯನ ಮತ್ತು ಅನ್ವಯಿಕ ವಿಜ್ಞಾನವಾಗಿದೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ವಿ.ಆಯ್.ಕುರಗೋಡ ಮಾತನಾಡಿದರು. ಪ್ರಾಚಾರ್ಯ ಎಸ್.ಎಸ್.ಯಂಕಂಚಿ ಸ್ವಾಗತಿಸಿದರು. ಸಮ್ಮೇಳನದ ಸಂಯೋಜಕ ಡಾ.ಆಯ್.ಆಯ್. ಪಟ್ಟಣಶೆಟ್ಟಿ ಸಮ್ಮೇಳನ ಕುರಿತು ಮಾಹಿತಿ ನೀಡಿದರು. ಬೆಂಗಳೂರಿನ ಜೆಎನ್ಆರ್ಸಿ ಪ್ರೊ. ಚಂದ್ರಭಾಸ ನಾರಾಯಣ, ಪ್ರೊ. ಸುಭಾಷ ಬೆಹರಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಸ್.ಎನ್. ಮೂರ್ತಿ, ಪ್ರಾಚಾರ್ಯ ಎಂ.ಎಂ.ಹೊಳ್ಳಿಯವರ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಸ್.ಪಿ.ಸಂಶಿಮಠ, ಎಸ್.ವಿ.ಸಂಕನೂರ ಹಾಜರಿದ್ದರು. ಮೇಘಾ ಗಲಗಲಿ ಪ್ರಾರ್ಥಿಸಿದರು, ತೇಜಸ್ವಿನಿ ಗದ್ದಗಿಮಠ, ಕವಿತಾ ಮರಳಪ್ಪನವರ ನಿರೂಪಿಸಿದರು. ಎಂ.ಬಿ.ಚನ್ನಪ್ಪಗೌಡರ ವಂದಿಸಿದರು.